ಬುಧವಾರದಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗ ಚಿಕ್ಕಮಗಳೂರಿನಲ್ಲಿ ಇಂಧನ ಸಚಿವರಾದ ಕೆ.ಜೆ ಜಾರ್ಜ್ ರವರನ್ನು ಭೇಟಿ ಮಾಡಿ ಬೆಳೆಗಾರರಿಗೆ ಸಂಬಂಧಿಸಿದ ಹಲವು ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದರು. ಕೆ.ಜಿ.ಎಫ್. ಅಧ್ಯಕ್ಷರಾದ ಹೆಚ್.ಟಿ. ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಇಂಧನ ಸಚಿವರನ್ನು ಭೇಟಿಯಾದ ನಿಯೋಗ ಸಚಿವರನ್ನು ಅಭಿನಂಧಿಸಿ ಮನವಿ ಪತ್ರ ಸಲ್ಲಿಸಿತು.
ಮನವಿ ಪತ್ರದಲ್ಲಿ ಪ್ರಮುಖವಾಗಿ 10 ಹೆಚ್ ಪಿ ವರೆಗಿನ ವಿದ್ಯುತ್ ಪಂಪ್ ಸೆಟ್ ಗಳಿಗೆ ರಾಜ್ಯದ ಇತರೆ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಿರುವಂತೆ ಕಾಫಿ ಬೆಳೆಗಾರರಿಗೂ ನೀಡಬೇಕಾಗಿ ಕೇಳಿಕೊಂಡಾಗ ಮಾನ್ಯ ಸಚಿವರು ಮೊದಲು ಬಿಲ್ ಮಾಡಿ ನಂತರ ನಿಮ್ಮ ಖಾತೆಗೆ ಹಣವನ್ನು ಹಾಕುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದರು, ಆದರೆ ಇದುವರೆಗೂ ಕಾರ್ಯಗತವಾಗಿಲ್ಲ ಎಂದಾಗ ಕಾರ್ಯಗತ ಮಾಡಿಕೊಡುವುದಾಗಿ ಒಪ್ಪಿರುತ್ತಾರೆ.
ಐ ಪಿ ಸೆಟ್ ಮೇಲಿನ ಬಿಲ್ ಹಳೆ ಬಾಕಿ, ಬಡ್ಡಿ ಮತ್ತು ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಬೇಕೆಂದು ಕೇಳಿಕೊಂಡಾಗ ಅದನ್ನು ಪರಿಶೀಲನೆ ಮಾಡುವುದಾಗಿ ತಿಳಿಸಿರುತ್ತಾರೆ.
ಸರ್ಕಾರಿ ಸಾಗುವಳಿ ಜಮೀನು ಗುತ್ತಿಗೆ ಆಧಾರದಲ್ಲಿ ನೀಡುವ ವಿಚಾರವಾಗಿ ಬೇಗ ಅನುಷ್ಠಾನ ಮಾಡಿಕೊಡಬೇಕು, ಹಿಂದಿನ ಅಧಿವೇಶನದಲ್ಲಿ ಆಗಿರುವುದನ್ನು ಮಾನ್ಯ ಮುಖ್ಯಮಂತ್ರಿಗಳು ಜೊತೆ ಮಾತನಾಡಬೇಕೆಂದು ಕೇಳಿಕೊಂಡಾಗ ಸಕಾರಾತ್ಮಕವಾಗಿ ಸ್ಪಂದಿಸಿ, ಒಪ್ಪಿ ಮಾತನಾಡುತ್ತೇನೆ ಎಂದು ಹೇಳಿರುತ್ತಾರೆ.
ಸರ್ಫಾಸಿ ವಿಚಾರವಾಗಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕೆಂದಾಗ ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ತಿಳಿಸುತ್ತೇನೆ ಎಂದು ಒಪ್ಪಿರುತ್ತಾರೆ.
ನಿಯೋಗದಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ತಮ್ಮಯ್ಯನವರು, ಶೃಂಗೇರಿ ಕ್ಷೇತ್ರದ ಶಾಸಕರಾದ ಶ್ರೀ ಟಿಡಿ ರಾಜೇಗೌಡ ರವರು, ಮಾಜಿ ಎಂ ಎಲ್ ಸಿ ಆದ ಶ್ರೀ ಗಾಯತ್ರಿಶಾಂತೆಗೌಡರವರು ಹಾಗೂ ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷರಾದ ಎ.ಕೆ. ವಸಂತೇಗೌಡ, ಖಜಾಂಚಿ ಆದ ಹೆಚ್ ಎಂ ಉಮೇಶ್ , ಸಂಘಟನಾ ಕಾರ್ಯದರ್ಶಿಯವರಾದ ಎ.ಎನ್ ನಾಗರಾಜು, ಮಾಜಿ ಖಜಾಂಚಿ ಹಾಗೂ ಚಿಕ್ಕಮಗಳೂರು ಕಸಬಾ ಹೋಬಳಿ ಬೆಳೆಗಾರರ ಸಂಘದ ಪದಾಧಿಕಾರಿಯಾದ ಐ.ಎಂ ಮಹೇಶ ಗೌಡ , ವಸ್ತಾರೆ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಟಿ.ಡಿ ಮಲ್ಲೇಶ್ , ಕಾರ್ಯದರ್ಶಿ ಕೆ.ಯು ರತೀಶ್ , ಆಲ್ದೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಸಿ .ಎಸ್ ಸುರೇಶ್, ಖಾಂಡ್ಯ ಬೆಳೆಗಾರರ ಸಂಘದ ಕಾರ್ಯದರ್ಶಿ ರತ್ನಾಕರ್, ಕರ್ನಾಟಕ ಕಾಫಿ ಬೆಳೆಗಾರರ ಸಂಘ ಅರೇಹಳ್ಳಿ ಅಧ್ಯಕ್ಷರಾದ ಬಸವರಾಜು ಹಾಗೂ ಇನ್ನಿತರರಿದ್ದರು.