ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಲವರಿಗ ಗಾಯವಾಗಿರುವ ಘಟನೆ ನಡೆದಿದೆ. ಮೂಡಿಗೆರೆ ಪಟ್ಟಣದ ಬಿಳಗುಳ ಬಳಿ ಈ ಘಟನೆ ನಡೆದಿದೆ. ಕಾವೇರಿ ಹೆಸರಿನ ಖಾಸಗಿ ಬಸ್ ವಿದ್ಯತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಜಖಂಗೊಂಡಿದೆ. ಬಸ್ಸಿನಲ್ಲಿದ್ದ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಪ್ರತಿದಿನ ಬೆಂಗಳೂರು ಮತ್ತು ಮೂಡಿಗೆರೆ ಕೊಟ್ಟಿಗೆಹಾರ ನಡುವೆ ಸಂಚರಿಸುವ ಕಾವೇರಿ ಬಸ್ ಇಂದು ಮುಂಜಾನೆ ಬೆಂಗಳೂರಿನಿಂದ ಹಾಸನ ಚಿಕ್ಕಮಗಳೂರು ಮಾರ್ಗವಾಗಿ ಮೂಡಿಗೆರೆ ಕಡೆಗೆ ಬರುತ್ತಿದ್ದಾಗ ಮೂಡಿಗೆರೆ ಸಮೀಪದ ಬಿಳಗುಳದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಒಂದೇ ಸ್ಥಳದಲ್ಲಿ ಎರಡು ವಿದ್ಯುತ್ ಕಂಬಗಳು ಇದ್ದು ಎರಡೂ ಕಂಬಗಳಿಗೆ ಬಸ್ ಡಿಕ್ಕಿಯಾಗಿದ್ದು ವಿದ್ಯುತ್ ಕಂಬಗಳು ಮುರಿದು ಬಸ್ಸಿನ ಮೇಲೆ ಬಿದ್ದಿವೆ. ಪಕ್ಕದಲ್ಲಿಯೇ ದೊಡ್ಡ ಗಾತ್ರದ ಮರವೂ ಒಂದು ಇದ್ದು ಮರಕ್ಕೆ ಡಿಕ್ಕಿ ಹೊಡೆದಿದ್ದರೆ, ಒಂದು ವೇಳೆ ಬಸ್ಸಿಗೆ ವಿದ್ಯುತ್ ಪ್ರವಹಿಸಿದ್ದರೆ ಭಾರೀ ಅನಾನುತ ಸಂಭವಿಸುವ ಸಾಧ್ಯತೆ ಇತ್ತು.
ಬೆಳಗಿನ ಜಾವವಾಗಿದ್ದರಿಂದ ಮಂಜು ಕವಿದ ವಾತಾವರಣ ಅಥವಾ ಚಾಲಕ ನಿದ್ರೆಯ ಮಂಪರಿನಿಂದ ನಿಯಂತ್ರಣ ತಪ್ಪಿ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಘಟನೆ ನಡೆದ ತಕ್ಷಣ ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಮೂಡಿಗೆರೆ ಘಟಕದ ಸದಸ್ಯರು ಮತ್ತು ಮೂಡಿಗೆರೆ ಪೊಲೀಸ್ 112 ತಂಡ ಸ್ಥಳಕ್ಕೆ ಆಗಮಿಸಿ ಬಸ್ಸಿನಲ್ಲಿದ್ದವರ ಸಹಾಯಕ್ಕೆ ಬಂದಿದ್ದಾರೆ.