ಇತ್ತೀಚೆಗೆ ಮಹಾರಾಷ್ಟ್ರದ ಲೋನವಾಲದ ಐ ಎನ್ ಎಸ್ ಶಿವಾಜಿ ಸೇನಾ ನೆಲೆಯಲ್ಲಿ ಹಮ್ಮಿಕೊಂಡಿದ್ದ ಎನ್.ಸಿ.ಸಿ. ನೇವಿ ರಾಷ್ಟ್ರಮಟ್ಟದ ಶಿಬಿರದಲ್ಲಿ ಹಮ್ಮಿಕೊಂಡಿದ್ದ ಬೋಟ್ ಫುಲ್ಲಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ಗೋವಾ ಡೈರಕ್ಟರೇಟ್ ತಂಡ ಕಂಚಿನ ಪದಕವನ್ನು ಗಳಿಸಿದೆ.
ಕರ್ನಾಟಕ ಗೋವಾ ಡೈರಕ್ಟರೇಟ್ ತಂಡದ ಸದಸ್ಯರಾಗಿ ನಮ್ಮ ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಯೋರ್ವ ಪ್ರತಿನಿಧಿಸಿ ಹೆಮ್ಮೆ ತಂದಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿ ದೊಡ್ಡನಂದಿ ಗ್ರಾಮದ ಅಶೋಕ್ ಮತ್ತು ವೀಣಾ ಅವರ ಪುತ್ರ ಅಂಕಿತ್ ಕಂಚಿನ ಪದಕ ಪಡೆದ ತಂಡದ ಸದಸ್ಯರಾಗಿದ್ದರು.
ಪ್ರಸ್ತುತ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಂಕಿತ್ ಕಾಲೇಜಿನ ಎನ್.ಸಿ.ಸಿ. ವಿಭಾಗಕ್ಕೆ ಸೇರ್ಪಡೆಯಾಗಿ ವಿವಿಧ ಶಿಬಿರ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಅಂಕಿತ್ ಕರ್ನಾಟಕ ಗೋವಾ ಡೈರೆಕ್ಟರೇಟ್ ತಂಡಕ್ಕೆ ಆಯ್ಕೆಯಾಗಿದ್ದು ಬೋಟ್ ಫುಲ್ಲಿಂಗ್ ತಂಡದಲ್ಲಿ ಸ್ಥಾನ ಪಡೆದು ತಂಡ ಕಂಚಿನ ಪದಕ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕರ್ನಾಟಕ ಗೋವಾ ಡೈರೆಕ್ಟರೇಟ್ ತಂಡ ಆರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಅಂಕಿತ್ ಸಾಧನೆಗೆ ಪೋಷಕರು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.