ಹುಲಿ ಉಗುರಿನಿಂದ ಮುನ್ನೆಲೆಗೆ ಬಂದ ವನ್ಯಜೀವಿ ಸಂರಕ್ಷಣಾ ಕಾಯ್ದೆ ಈಗ ರಾಜ್ಯದಲ್ಲಿ ವ್ಯಾಪಕವಾಗಿ ಹೊಸ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ಹಲವರ ಬಂಧನಕ್ಕೆ ಕಾರಣವಾಗುತ್ತಿದೆ.
ಇದೀಗ ಕಾಫಿನಾಡಲ್ಲಿ ಬಾಬಾಬುಡನ್ ದರ್ಗಾದ ಶಾಖಾದ್ರಿ ಮನೆಯಲ್ಲಿ ಹುಲಿ ಚರ್ಮ ಮತ್ತು ಜಿಂಕೆ ಚರ್ಮ ಪತ್ತೆಯಾಗಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಿಕ್ಕಮಗಳೂರು ದತ್ತಪೀಠಕ್ಕೆ ಹೊಂದಿಕೊಂಡಂತೆ ಇರುವ ಬಾಬಾಬುಡನ್ ದರ್ಗಾದ ಹಿಂದಿನ ಶಾಖಾದ್ರಿ ಒಬ್ಬರು ಹುಲಿ ಚರ್ಮದ ಮೇಲೆ ಕುಳಿತ್ತಿದ್ದ ಪೋಟೋ ವೈರಲ್ ಆಗಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಕೆಲ ಸಂಘಟನೆಗಳು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದವು.
ಇದರ ಜಾಡು ಹಿಡಿದು ತನಿಖೆಗೆ ಮುಂದಾದ ಅರಣ್ಯ ಅಧಿಕಾರಿಗಳು ಸ್ವತಃ ಶಾಕ್ ಆಗುವಂತಹ ಸನ್ನಿವೇಶ ಶಾಖಾದ್ರಿ ಮನೆಯೊಳಗೆ ಕಂಡುಬಂದಿದೆ.
ಬಾಬಾಬುಡನ್ ದರ್ಗಾದ ಹಾಲಿ ಶಾಖಾದ್ರಿಗೌಸ್ ಮೊಹಿಯುದ್ದೀನ್ ಅವರ ಚಿಕ್ಕಮಗಳೂರು ನಗರದ ಮಾರುಕಟ್ಟೆ ರಸ್ತೆಯ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆಯಾಗಿವೆ. ಚರ್ಮವನ್ನ ವಶಕ್ಕೆ ಪಡೆದ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಅಧಿಕಾರಿಗಳು ತನಿಖೆಗೆ ತೆರಳಿದ್ದಾಗ ಶಾಖಾದ್ರಿ ಬೆಂಗಳೂರಿಗೆ ತೆರಳಿದ್ದರು. ನಂತರ ಬೆಂಗಳೂರಿನಿಂದ ಮನೆಯ ಕೀ ಅನ್ನು ಬಸ್ಸಿನಲ್ಲಿ ತರಿಸಿ ಸುಮಾರು 10 ಗಂಟೆಗಳ ಕಾಲ ಕಾದ ನಂತರ ಅರಣ್ಯ ಅಧಿಕಾರಿಗಳು ಮನೆಯ ಬೀಗ ತೆಗೆದು ತಪಾಸಣೆ ನಡೆಸಿದ ವೇಳೆ ಮನೆಯಲ್ಲಿ ಚಿರತೆ ಮತ್ತು ಜಿಂಕೆಯ ಚರ್ಮ ಪತ್ತೆಯಾಗಿದೆ.
ಶುಕ್ರವಾರ ತಡರಾತ್ರಿಯವರೆಗೂ ಅಧಿಕಾರಿಗಳು ತಪಾಸಣೆ ಮುಂದುವರಿಸಿದ್ದರು. ಶಾಖಾದ್ರಿಯವರನ್ನು ವಶಕ್ಕೆ ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸುವ ತಯಾರಿ ನಡೆಸಿದ್ದಾರೆ.
ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.