ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರ ವಿಚಾರವಾಗಿ ಗೊಂದಲ ಮುಂದುವರಿದಿದೆ. ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಿರುದ್ಧ ಸ್ವಪಕ್ಷ ಬಿ.ಜೆ.ಪಿ.ಯ ಸದಸ್ಯರೇ ತಿರುಗಿಬಿದ್ದಿದ್ದಾರೆ. ಅಧ್ಯಕ್ಷರನ್ನು ಖುರ್ಚಿಯಿಂದ ಇಳಿಸಬೇಕು ಎಂದು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಅದನ್ನೂ ಕೈಗೂಡಿಲ್ಲ.
ಇದೀಗ ಬಿ.ಜೆ.ಪಿ. ಸದಸ್ಯರು ನಗರಸಭೆ ಅಧ್ಯಕ್ಷರ ಕುರ್ಚಿಯನ್ನೇ ಬದಲು ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಸೋಫಾ ಚೇರ್ ತೆಗೆದು, ಪ್ಲಾಸ್ಟಿಕ್ ಚೇರ್ ನ್ನು ಬಿಜೆಪಿ ಸದಸ್ಯರು ಇಟ್ಟಿದ್ದಾರೆ. ತದನಂತರ ಮಧ್ಯೆಪ್ರವೇಶ ಮಾಡಿದ ನಗರಸಭಾ ಆಯುಕ್ತರು ಪ್ಲಾಸ್ಟಿಕ್ ಚೇರ್ ತೆಗಿಸಿ ಸೋಪಾ ಚೇರ್ ಇಟ್ಟು ನಗರಸಭೆಗೆ ಪೊಲೀಸ್ ಭದ್ರತೆಯನ್ನು ಒದಗಿಸಿದ್ದಾರೆ.
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಕೆಳಗಿಳಿಸಲು ಕಳೆದ ಎರಡು ತಿಂಗಳಿನಿಂದ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ಪದೇಪದೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹಿಂಪಡೆಯುತ್ತಿರುವ ವರಸಿದ್ದಿ ವೇಣುಗೋಪಾಲ್ ತನ್ನದೇ ಪಕ್ಷವಾಗಿರುವ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಗುರುವಾರ ನಗರಸಭೆ ಅಧ್ಯಕ್ಷರ ಕಚೇರಿಗೆ ತೆರಳಿದ ಬಿಜೆಪಿ ಸದಸ್ಯರು ಅಧ್ಯಕ್ಷರ ಕುರ್ಚಿಯನ್ನೇ ಬದಲು ಮಾಡಿ ಅಚ್ಚರಿ ಮೂಡಿಸಿದರು.
ನಗರ ಸಭೆ ಅಧ್ಯಕ್ಷರ ಕಚೇರಿಗೆ ತೆರಳಿದ ಸದಸ್ಯರುಗಳು ಅಲ್ಲಿ ಅಧ್ಯಕ್ಷರು ಕೋರುತ್ತಿದ್ದ ಕುಶನ್ ಚೇರನ್ನು ಬದಲಿಸಿ ಆ ಜಾಗದಲ್ಲಿ ಪ್ಲಾಸ್ಟಿಕ್ ಕುರ್ಚಿಯನ್ನು ಇಟ್ಟು ವಿನೂತನ ಪ್ರತಿಭಟನೆ ನಡೆಸಿದ್ದಾರೆ ಜೊತೆಗೆ ಅಧ್ಯಕ್ಷರ ಕೊಠಡಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್: ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಈಗಾಗಲೇ 21 ಮಂದಿ ನಗರಸಭೆ ಸದಸ್ಯರು ಜಿಲ್ಲಾಧಿಕಾರಿಗೆ ಪತ್ರ ನೀಡಿದ್ದರು. ಇದರ ಬೆನ್ನಲ್ಲೇ ಗುರುವಾರ ಈ ಎಲ್ಲಾ ಸದಸ್ಯರುಗಳು ನಗರಸಭೆ ಕಚೇರಿಗೆ ತೆರಳಿ ಅಧ್ಯಕ್ಷರು ಕಚೇರಿಗೆ ಬಂದಲ್ಲಿ ತಡೆಯಲು ಉದ್ದೇಶಿಸಿದ್ದರು. ಜೊತೆಗೆ ಅಧ್ಯಕ್ಷರು ವಿಶ್ವಾಸ ನಿರ್ಣಯ ಮಂಡನೆ ಮಾಡುವವರೆಗೆ ಅವರಿಗೆ ಅಧ್ಯಕ್ಷರ ಕೊಠಡಿಯಲ್ಲಿ ಕೂರಲು ಅವಕಾಶ ನೀಡದಿರಲಿ ನಿರ್ಧರಿಸಿದ್ದರು.
ಇದರ ನಡುವೆ ನಗರಸಭಾ ಆಯುಕ್ತರಾದ ಬಸವರಾಜ್ ತಕ್ಷಣ ಮಧ್ಯಪ್ರವೇಶ ಮಾಡಿ ಪ್ಲಾಸ್ಟಿಕ್ ಚೇರ್ ತೆಗಿಸಿ ಸೋಪಾ ಚೇರ್ ಇಟ್ಟು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ತದನಂತರ ನಗರಸಭೆಗೆ ಆಗಮಿಸಿದ ಅಧ್ಯಕ್ಷ ವರಸಿದ್ದ ವೇಣುಗೋಪಾಲ್ ಅಧಿಕಾರಿಗಳೊಂದಿಗೆ ವಿವಿಧ ಸಭೆಗಳನ್ನು ನಡೆಸಿದರು. ಮುಂಜ್ರಾಗತ ಕ್ರಮವಾಗಿ ನಗರಸಭೆ ಮುಂದೆ ಪೊಲೀಸ್ ಇಲಾಖೆ ಪೊಲೀಸರನ್ನು ನಿಯೋಜನೆ ಮಾಡಿ ಬಂದೋಬಸ್ತ್ ಕಲ್ಪಿಸಿದೆ.