ಮೂಡಿಗೆರೆ ಕ್ಷೇತ್ರದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತ್ತಿದ್ದೇನೆಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಪಟ್ಟಣದ ತಾಲೂಕು ಕಚೇರಿಯಲ್ಲಿ ಗೋಣಿಬೀಡು, ಕಸಬಾ ಹಾಗೂ ಬಾಳೂರು ಹೋಬಳಿ ವ್ಯಾಪ್ತಿಯಲ್ಲಿ 94ಸಿಯಲ್ಲಿ ಅರ್ಜಿ ಸಲ್ಲಿಸಿದ 50 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ತನ್ನ ಕ್ಷೇತ್ರ ವ್ಯಾಪ್ತಿಗೆ ಬರುವ 3 ತಾಲೂಕಿನಲ್ಲಿ ನಿವೇಶನ ಮತ್ತು ಸ್ಮಶಾನ ಸಮಸ್ಯೆ ಇತ್ಯರ್ಥಪಡಿಸಲು ಈಗಾಗಲೇ ಕ್ರಮ ವಹಿಸಿದ್ದೇನೆ. ಕಳೆದ ನಾಲ್ಕೆöÊದು ವರ್ಷದಿಂದ 94ಸಿ ಯಲ್ಲಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳ ಪಟ್ಟಿ ತರಿಸಿಕೊಂಡು ಅದನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಬಾಕಿ ಇರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಕ್ರಮ ವಹಿಸಲಾಗಿದೆ. ಅದಕ್ಕಾಗಿ 35ರಿಂದ 50 ಎಕರೆ ಭೂಮಿ ಗುರುತು ಮಾಡಿ ಸರ್ವೆ ನಡೆಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಿ ಸ್ಮಶಾನ ಭೂಮಿ ಮತ್ತು ನಿವೇಶನದ ಸಮಸ್ಯೆ ಬಗೆಹರಿಸಲಾಗುವುದು. ಡೀಮ್ಡ್ ಅರಣ್ಯ ಸಮಸ್ಯೆ ಇತ್ಯರ್ಥಪಡಿಸಲು ಈಗಾಗಲೇ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಲು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಜತೆಗೆ ಒತ್ತುವರಿ ಪ್ರದೇಶವನ್ನು ಬಿಡಿಸಲು ಕ್ರಮ ವಹಿಸಿದ್ದು, ಈ ಕಾರ್ಯ ನಡೆದರೆ ನಿವೇಶನದ ಹಾಗೂ ಸ್ಮಶಾನದ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ. ಉಗ್ಗೆಹಳ್ಳಿ ನಿರಾಶ್ರಿತರಿಗೆ ಬೆಟ್ಟದಮನೆಯಲ್ಲಿ ಮನೆ ಕಟ್ಟಿಕೊಳ್ಳಲು ಜಾಗ ಗುರುತು ಮಾಡಲಾಗಿದೆ. ಆದರೆ ಮೂಲಭೂತ ಸಮಸ್ಯೆಯಿಂದ ಅಲ್ಲಿ ಮನೆ ಕಟ್ಟಿಕೊಳ್ಳಲು ಜನರು ಹಿಂದೇಟು ಹಾಕುವ ಬಗ್ಗೆ ಗಮನಕ್ಕೆ ಬಂದಿದೆ. ಹಾಗಾಗಿ ತಾನೇ ಖುದ್ದು ಅಧಿಕಾರಿಗಳನ್ನು ಸ್ಥಳಕ್ಕೆ ಕರೆದೊಯ್ದು ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ತಾ.ಪಂ. ಮಾಜಿ ಅಧ್ಯಕ್ಷ ಸುಬ್ರಾಯಗೌಡ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಬಾಳೂರು ಮಹೇಶ್, ರಮೇಶ್ ಪಟೇಲ್, ಶಿರಸ್ತೆದಾರ ಕುಮಾರ್ ಮತ್ತಿತರರಿದ್ದರು.