ಮೂಡಿಗೆರೆಯಲ್ಲಿ ಶ್ರೀ ದುರ್ಗಾದೇವಿ ಉತ್ಸವ ಸಮಿತಿಯವರು ಹಿಂದೂ ಧರ್ಮದ ಪವಿತ್ರ ಸಂಕೇತವಾದ ಕೇಸರಿ ಧ್ವಜ ಮತ್ತು ಬಣ್ಣಕ್ಕೆ ಅವಮಾನ ಮಾಡಿದ್ದಾರೆ ಎಂದು ಗಣೇಶೋತ್ಸವ ಸಮಿತಿ ಮತ್ತು ಹಿಂದೂಪರ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ಇಂದು ಮೂಡಿಗೆರೆ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು ದುರ್ಗಿ ಉತ್ಸವ ಸಮಿತಿಯವರ ಕೃತ್ಯಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣೇಶ ಚತುರ್ಥಿ ಆಚರಣೆ ಸಂದರ್ಭದಲ್ಲಿ. ಹಾಕಿದ್ದ ಕೇಸರಿ ಬಣ್ಣದ ಫ್ಲ್ಯಾಗ್ ಗಳನ್ನು ದುರ್ಗಿ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಸಂಪೂರ್ಣ ತೆಗೆದಿದ್ದಾರೆ ಈ ಮೂಲಕ ನಮ್ಮ ಸನಾತನ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ ಹಿಂದೂಗಳ ನಡುವೆ ಬಿರುಕು ಮೂಡಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮೂಡಿಗೆರೆ ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಮತ್ತು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಜಿ.ಅನುಕುಮಾರ್ ಮಾತನಾಡಿ; ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಗಣಪತಿ ಉತ್ಸವದಲ್ಲಿ ಹಾಕಿದ್ದ ಕೇಸರಿ ಧ್ವಜಗಳು ಇದಕ್ಕಿದ್ದಂತೆ ಕಣ್ಮರೆ ಯಾಗಿವೆ ಮತ್ತು ಮುಖ್ಯ ದ್ವಾರದಲ್ಲಿ ಕೂಡ ಕೇಸರಿ ಬಣ್ಣದ ಕಮಾನು ಮಾಯವಾಗಿದೆ. ಸನಾತನ ಹಿಂದೂ ಧರ್ಮದ ಬಗ್ಗೆ ಅವಮಾನ ಮಾಡಿದ್ದಾರೆ.
ಕೇಸರಿ ಯಾವುದೇ ಒಂದು ಪಕ್ಷ ಅಥವಾ ಸಂಘಟನೆಗೆ ಸೀಮಿತವಾದ ಬಣ್ಣವಲ್ಲ. ಅದು ನಮ್ಮ ಸಂಸ್ಕೃತಿಯ ಜೊತೆಗೆ ಬಂದಿರುವಂತಹುದು. ಆದರೆ ದುರ್ಗಿ ಸಮಿತಿಯವರು ಧಾರ್ಮಿಕ ಕಾರ್ಯಕ್ರಮಕ್ಕೆ ರಾಜಕೀಯ ರೂಪ ನೀಡಿ ಉದ್ದೇಶಪೂರ್ವಕವಾಗಿ ನಮ್ಮ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ
ಗಣಪತಿ ಉತ್ಸವದಲ್ಲಿ ಅಳವಡಿಸಿದ್ದ ಕೇಸರಿ ಧ್ವಜ ತೆಗೆದವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಗಣಪತಿ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.