ರಸ್ತೆ ಮಧ್ಯೆ ಮಲಗಿದ್ದ ಬಿಡಾಡಿ ದನವೊಂದಕ್ಕೆ ಬೈಕ್ ಗುದ್ದಿ ಬೈಕ್ ಸವಾರ ಮೃತ ಪಟ್ಟಿರುವ ಘಟನೆ ನಡೆದಿದೆ.
ಎರಡು ದಿನಗಳ ಹಿಂದೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಣಕಲ್ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿತ್ತು.
ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಕೊನೆಯುಸಿರೆಳೆದಿದ್ದಾರೆ.
ಜನ್ನಾಪುರದ ಹೊಯ್ಸಳಲು ನಿವಾಸಿಯಾದ ಮೋಹನ್ (25 ವರ್ಷ) ಮೃತ ದುರ್ದೈವಿ.
ಕೆಲಸದ ನಿಮಿತ್ತ ಮೋಹನ್ ಕಳಸ ಸಮೀಪದ ಬಾಳೆಹೊಳೆಗೆ ಹೋಗಿ ಕೊಟ್ಟಿಗೆಹಾರ ಮಾರ್ಗವಾಗಿ ಜನ್ನಾಪುರಕ್ಕೆ ತೆರಳುತ್ತಿದ್ದಾಗ ರಸ್ತೆಗೆ ಅಡ್ಡ ಬಂದ ದನಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ದನದ ಕೊಂಬು ತಲೆಗೆ ಬಡಿದು ತೀವ್ರ ಪೆಟ್ಟಾಗಿತ್ತು.
ಗಾಯಾಳುವನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ತಲೆಗೆ ತೀವ್ರ ಗಾಯವಾದ ಹಿನ್ನಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೋಹನ್ ಮೃತಪಟ್ಟಿದ್ದಾರೆ.
ಹೆಚ್ಚುತ್ತರುವ ಬಿಡಾಡಿ ದನಗಳ ಹಾವಳಿ :
ಬಣಕಲ್, ಕೊಟ್ಟಿಗೆಹಾರ, ಚಕ್ ಮಕ್ಕಿ, ಪಲ್ಗುಣಿ, ಸಬ್ಬೆನಹಳ್ಳಿ ಭಾಗದಲ್ಲಿ
ಬಿಡಾಡಿ ದನಗಳ ಸಮಸ್ಯೆ ಹಿಂದಿನಿಂದಲೂ ಇದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಡಾಡಿ ದನಗಳಿಂದ ಹಲವು ಅಪಘಾತಗಳು ಸಂಭವಿಸುತ್ತಿವೆ. ಇನ್ನೂ ಎಷ್ಟು ಜೀವಗಳು ಬಲಿಯಾಗಬೇಕಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ
ಆದಷ್ಟು ಬೇಗ ಬಿಡಾಡಿ ದನಗಳ ಬಗ್ಗೆ ಕ್ರಮ ಕೈಗೊಳ್ಳದೆ ಇದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಬಿಡಾಡಿ ದನಗಳ ಹಾವಳಿ ಕುರಿತು ಚರ್ಚೆ ನಡೆಸಲು ಅಕ್ಟೋಬರ್ 27 ರಂದು ಕೊಟ್ಟಿಗೆಹಾರ ತರುವೆ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಲು ಮೂಡಿಗೆರೆ ತಾ.ಪಂ.ಕಾರ್ಯನಿರ್ವಾಹಣ ಅಧಿಕಾರಿ ರಮೇಶ್ ಅವರು ಸಭೆ ಕರೆದಿದ್ದಾರೆ.