ಮೂಡಿಗೆರೆ ತಾಲೂಕಿನ ಜಿ.ಕೆಲ್ಲೂರು ಮತ್ತು ಘಟ್ಟದಹಳ್ಳಿ ಸರ್ವೆ ನಂ82ರಲ್ಲಿ 1 ಎಕರೆ ಜಾಗ ಸ್ಮಶಾನಕ್ಕಾಗಿ ಮೀಸಲಿಟ್ಟಿದ್ದ ಜಾಗವನ್ನು ಗುರುತು ಮಾಡಿಕೊಡಬೇಕೆಂದು ಮಾಕೋನಹಳ್ಳಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಒತ್ತಯಿಸಿದರು.
ಅವರು ಶುಕ್ರವಾರ ತಾಲೂಕು ಕಚೇರಿ ಎದುರು ನಡೆಸಿದ ಧರಣಿಯಲ್ಲಿ ಮಾತನಾಡಿದರು. ತಾಲೂಕಿನ ಜಿ.ಕೆಲ್ಲೂರು ಮತ್ತು ಘಟ್ಟದಹಳ್ಳಿ ಗ್ರಾಮದಲ್ಲಿ 180ಕ್ಕೂ ಅಧಿಕ ಕುಟುಂಬಗಳು ವಾಸವಿದೆ. ಹಿಂದಿನಿಂದಲೂ ಸ್ಮಶಾನ ಸಮಸ್ಯೆ ಇದೆ. ಈ ಬಗ್ಗೆ ಕಳೆದ 20 ವರ್ಷದಿಂದ ಸ್ಮಶಾನ ಭೂಮಿಗಾಗಿ ಎಂಎಲ್ಎ, ಎಂಎಲ್ಸಿ, ಡಿಸಿ, ಎಸಿ, ತಹಸೀಲ್ದಾರ್ ಅವರಿಗೆ ಮನವಿ ಕೊಡುತ್ತಾ ಬಂದಿದ್ದರೂ ಪ್ರಯೋಜನವಾಗಿಲ್ಲ ಅಲ್ಲಿ ಸ್ಮಶಾನವಿಲ್ಲದ ಕಾರಣ ಮರಣ ಹೊಂದಿದವರ ಅಂತ್ಯಕ್ರಿಯೆಗೆ ಮೂಡಿಗೆರೆ ಪಟ್ಟಣ ಸಮೀಪದ ಬೀಜವಳ್ಳಿ ಚಿತಾಗಾರಕ್ಕೆ ವಾಹನಕ್ಕೆ ಸಾವಿರಾರು ರೂ ಹಣ ಕೊಟ್ಟು ಶವ ತರುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ಗ್ರಾಮದಲ್ಲಿ ಹೆಚ್ಚಾಗಿ ಎಲ್ಲಾ ಕೂಲಿ ಕಾರ್ಮಿಕರಿದ್ದು, ಯಾವುದೇ ಕುಟುಂಬದಲ್ಲಿ ಸಾವು ಸಂಭವಿಸಿದರೂ ಮರಣ ಅಂತ್ಯಕ್ರಿಯೆ ನಡೆಸಲು ಜಾಗದ ಸಮಸ್ಯೆಯಿಂದ ಪಟ್ಟಣಕ್ಕೆ ಬರುವ ಅನಿವಾರ್ಯತೆ ಉಂಟಾಗಿದೆ. .ಹಾಗಾಗಿ ಎಸಿ ಅವರು ಸ್ಥಳಕ್ಕೆ ಆಗಮಿಸಿ ಜಾಗ ಗುರುತು ಮಾಡಿಕೊಡುವ ಬಗ್ಗೆ ಭರವಸೆ ನೀಡುವವರೆಗೂ ಧರಣಿ ಹಿಂಪಡೆಯುವುದಿಲ್ಲವೆಂದು ಹೇಳಿದರು. ಬಳಿಕ ಎಸಿ ಅವರು ಧರಣಿ ನಿರತರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಿದ ಬಳಿಕ ಧರಣಿ ಹಿಂಡೆದರು.
ಗ್ರಾಮಸ್ಥರಾದ ಶಿವಮೂರ್ತಿ, ಉಮೇಶ್, ಗಿರೀಶ್, ನಾಗೇಶ್, ಮಂಜುನಾಥ್, ನವೀನ, ಪ್ರೇಮ, ಮಂಜುಳ, ಅಶ್ವಿನಿ, ಕುಸುಮ ಮತ್ತಿತರರಿದ್ದರು.