ಮೂಡಿಗೆರೆ ಪಟ್ಟಣದಲ್ಲಿ ಅಕ್ಟೋಬರ್ 17ರಂದು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಡಿಗೆರೆ ಪಟ್ಟಣದ ಗಂಗನಮಕ್ಕಿ ಪೆಟ್ರೋಲ್ ಬಂಕ್ ಬಳಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಮೂಡಿಗೆರೆ ಸಾಮಾಜಿಕ ಸಕ್ರೀಯಾ ಸೇವಾ ಸಂಸ್ಥೆ ಕಾರ್ಯಕರ್ತರ ಸಹಾಯದಿಂದ ಪೊಲೀಸರು ಎಂ.ಜಿ.ಎಂ. ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ದಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ವ್ಯಕ್ತಿ ಕೊನೆಯುಸಿರೆಳೆದ್ದರು.
ವ್ಯಕ್ತಿಯ ಗುರುತು ಪರಿಚಯ ಸಿಗದೇ ಇದ್ದಾಗ ಮೃತದೇಹವನ್ನು ಚಿಕ್ಕಮಗಳೂರು ಚಿತಾಗಾರದಲ್ಲಿ ಇರಿಸಿ ವಾರಸುದಾರರ ಪತ್ತೆಗಾಗಿ ಪೊಲೀಸರು ಪ್ರಯತ್ನ ನಡೆಸಿದ್ದರು. ಮಾಧ್ಯಮಗಳಲ್ಲಿಯೂ ಸಹ ಸುದ್ದಿ ಪ್ರಕಟಿಸಲಾಗಿತ್ತು.
ಇದೀಗ ವ್ಯಕ್ತಿಯ ಗುರುತು ಪತ್ತೆ ಮಾಡುವಲ್ಲಿ ಮೂಡಿಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತ ವ್ಯಕ್ತಿಯನ್ನು ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಬಿಲ್ಲಾಡಿ ಗ್ರಾಮದ ನಂದೀಶ್ ಆಚಾರಿ ಎಂದು ಗುರುತಿಸಲಾಗಿದೆ. ಬಿಲ್ಲಾಡಿ ಗ್ರಾಮದ ಶಂಕರ ಆಚಾರಿ ಎಂಬುವವರ ಪುತ್ರನಾದ ನಂದೀಶ್ ಈಗ್ಗೆ 6 ವರ್ಷದ ಹಿಂದೆಯೇ ಮನೆ ಬಿಟ್ಟು ಹೋಗಿದ್ದ ಎನ್ನಲಾಗಿದೆ. ಮದ್ಯವ್ಯಸನಿಯಾಗಿದ್ದ ನಂದೀಶ್ ಊರೂರು ತಿರುಗುತ್ತಾ ಮೂಡಿಗೆರೆಗೆ ಬಂದು ಕೆಲವು ಕಡೆ ಕೆಲಸ ಮಾಡಿದ್ದ ಎಂದು ತಿಳಿದುಬಂದಿದೆ. ಸೋಮವಾರ ರಾತ್ರಿ ಮೂಡಿಗೆರೆ ಗಂಗನಮಕ್ಕಿ ಸಮೀಪ ವಿಷಸೇವನೆ ಮಾಡಿರುವ ಸ್ಥಿತಿಯಲ್ಲಿ ಕಂಡು ಬಂದು, ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.
ಪೊಲೀಸರು ಆತನ ಮನೆಯವರ ಸಮ್ಮುಖದಲ್ಲಿ ಇಂದು ಚಿಕ್ಕಮಗಳೂರು ಚಿತಾಗಾರದಲ್ಲಿ ನಂದೀಶ್ ನ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಮೂಡಿಗೆರೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಆದರ್ಶ ಅವರ ಮಾರ್ಗದರ್ಶನದಲ್ಲಿ ಎ.ಎಸ್.ಐ. ವೆಂಕಟೇಶ್ ಮೂರ್ತಿ ಮತ್ತು ಸಿಬ್ಬಂದಿ ಮೃತನ ವಾರಸುದಾರರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.