ಅಪರಿಚಿತ ವಾಹನವೊಂದು ಆಟೋ ಗೆ ಢಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಸಂಚರಿಸುತ್ತಿದ್ದ ದಂಪತಿಗಳು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ
ಮೂಡಿಗೆರೆ ಪಟ್ಟಣದ ಮುತ್ತಿಗೆಪುರ ಸಮೀಪ ಇಂದು ಮುಂಜಾನೆ ಈ ಘಟನೆ ನಡೆದಿದೆ. ಆಟೋಗೆ ಡಿಕ್ಕಿ ಹೊಡೆದ ಅಪರಿಚಿತ ಲಾರಿ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಡಿಕ್ಕಿ ರಭಸಕ್ಕೆ ರಸ್ತೆಗೆ ಮಗುಚಿ ಬಿದ್ದು ಆಟೋ ನಜ್ಜು ಗುಜ್ಜಾಗಿದೆ.
ಮೂಡಿಗೆರೆ ತಾಲ್ಲೂಕು ಜನ್ನಾಪುರ ಸಮೀಪದ ಮಣ್ಣಿಕೆರೆ ಗ್ರಾಮದ ಸಂತೋಷ್ ಮತ್ತು ಅವರ ಪತ್ನಿ ರಜನಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಜನ್ನಾಪುರದಲ್ಲಿ ಆಟೋ ಓಡಿಸುವ ಸಂತೋಷ್ ಅನಾರೋಗ್ಯದಿಂದ ಬಳಲುತ್ತಿದ್ದರು ಹಾಗಾಗಿ ಮಂಗಳೂರಿನ ಆಸ್ಪತ್ರೆಗೆ ತೆರಳಲು ತಮ್ಮದೇ ಆಟೋದಲ್ಲಿ ಪತ್ನಿಯೊಂದಿಗೆ ಇಂದು ಮುಂಜಾನೆ ಸುಮಾರು 5 ಗಂಟೆಗೆ ಮೂಡಿಗೆರೆ ಕಡೆಗೆ ಆಟೋದಲ್ಲಿ ಪಯಣಿಸಿದ್ದಾರೆ. ಮೂಡಿಗೆರೆ ಆಟೋ ನಿಲ್ಲಿಸಿ ಮಂಗಳೂರಿಗೆ ಬಸ್ ಮೂಲಕ ಹೋಗಲು ಅವರು ಮನೆಯಿಂದ ಹೊರಟಿದ್ದರು ಎನ್ನಲಾಗಿದೆ. ಮುತ್ತಿಗೆಪುರ ಬಳಿ ಬರುವಾಗ ಹೆದ್ದಾರಿಯಲ್ಲಿ ಅಪರಿಚಿತ ಲಾರಿಯೊಂದು ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಪಲ್ಟಿಯಾಗಿ ಬಿದ್ದಿದ್ದು ನಜ್ಜುಗುಜ್ಜಾಗಿದೆ. ಆಟೋದಲ್ಲಿ ಚಲಿಸುತ್ತಿದ್ದ ದಂಪತಿಗಳಿಗೆ ತೀವ್ರ ಪೆಟ್ಟಾಗಿದೆ.
ಈ ಸಂಬಂಧ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನದ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.