ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಬಾಳೆಹೊನ್ನೂರು ವಲಯ ಅರಣ್ಯ ವ್ಯಾಪ್ತಿಯ ದೇವದಾನ ಮೀಸಲು ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ನಾಲ್ಕು ಸಾಗುವಾನಿ ಮರ ಕಡಿತಲೆ ಮಾಡಿ ನಾಟಾ ಸಂಗ್ರಹ ಮಾಡಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಮಂಗಳವಾರ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ದೇವದಾನ ಎಸ್ಟೇಟ್ ನ ಸೂಪರ್ ವೈಸರ್ ಎ.ಎ.ಇಲಿಯಾಸ್ ಹಾಗೂ ರೈಟರ್ ಸಿ.ಜೆ.ರಿನೋ ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳು ದೇವದಾನ ಮೀಸಲು ಅರಣ್ಯದ ಸರ್ವೇ ನಂಬರ್ 343ರಲ್ಲಿ ನಾಲ್ಕು ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ, 31 ಸೈಜ್ ನಾಟಾವನ್ನು ತಯಾರಿಸಿ, 14 ರೌಂಡ್ ಲಾಗ್ ಗಳನ್ನು ಮಾಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಮೀಸಲು ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿರುವುದು ಕಂಡುಬಂದಿದ್ದು, ಈ ಬಗ್ಗೆ ತನಿಖೆ ನಡೆಸುತ್ತಾ ಹೋದಾಗ ಸ್ಥಳೀಯ ಎಸ್ಟೇಟ್ ನಲ್ಲಿ ಸೂಪರ್ ವೈಸರ್, ರೈಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇಲಿಯಾಸ್, ರಿನೋ ಅವರು ಮರವನ್ನು ಕಡಿತಲೆ ಮಾಡಿರುವ ಬಗ್ಗೆ ಖಚಿತವಾಗಿದೆ.
ಆರೋಪಿಗಳು ಕಡಿತಲೆ ಮಾಡಿರುವ ಮರದಲ್ಲಿ ತಯಾರಿಸಿದ್ದ 31 ಸೈಜ್ ನಾಟಾವನ್ನು ತಮ್ಮ ಮನೆಯಲ್ಲಿ ಉಳಿದ ರೌಂಡ್ ಲಾಗ್ ಗಳನ್ನು ಅರಣ್ಯ ಪ್ರದೇಶದಲ್ಲಿ ಸಂಗ್ರಹಿಸಿಟ್ಟಿದ್ದರು. ಆರೋಪಿಗಳಿಂದ 2.381 ಕ್ಯೂಬಿಕ್ ಮೀಟರ್ ಸಾಗುವಾನಿ ಮರದ ನಾಟಾ, ತುಂಡುಗಳನ್ನು ಹಾಗೂ ಮರ ಕೊಯ್ಯಲು ಬಳಸಿದ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ.
ಕಡಿತಲೆ ಮಾಡಿರುವ ಸಾಗುವಾನಿ ಮರಗಳ ಮೌಲ್ಯ ಸುಮಾರು 4 ಲಕ್ಷ ರೂ.ಗೂ ಅಧಿಕವಾಗಿದೆ. ಆರೋಪಿಗಳನ್ನು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಬಾಳೆಹೊನ್ನೂರು ವಲಯ ಅರಣ್ಯಾಧಿಕಾರಿ ಸಂದೀಪ್ ಮಾಹಿತಿ ನೀಡಿರುತ್ತಾರೆ.
ಎಸಿಎಫ್ ಚೇತನ್ ಮಂಗಲ್ ಗಸ್ತಿ ಮಾರ್ಗದರ್ಶನದಲ್ಲಿ ಸಂಗಮೇಶ್ವರಪೇಟೆ ಡಿಆರ್ಎಫ್ಓ ಮಂಜುನಾಥ್, ಸಿಬ್ಬಂದಿಗಳಾದ ಹನುಮಂತ ಲೋನಿ, ಕಾರ್ತಿಕ್, ಚಾಲಕ ಪ್ರಕಾಶ್ ಭಾಗವಹಿಸಿದ್ದರು.