ರಾಜ್ಯ ಸರ್ಕಾರದ ವಿರುದ್ಧ ಮೂಡಿಗೆರೆಯಲ್ಲಿ ಬಿ.ಜೆ.ಪಿ. ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮೂಡಿಗೆರೆ ಪಟ್ಟಣದ ಲಯನ್ಸ್ ವೃತ್ತದಲ್ಲಿ ಸಮಾವೇಶಗೊಂಡ ಬಿ.ಜೆ.ಪಿ. ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯದ ಕಾಂಗ್ರೇಸ್ ನೇತೃತ್ವದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟಿçÃಯ ಕಿಸಾನ್ ಮೋರ್ಚಾ ಕಾರ್ಯಕಾರಣಿ ಸದಸ್ಯ ದಿನೇಶ್ ದೇವವೃಂದ ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ಪ್ರಕೃತಿ ಕೂಡ ಮುನಿಸಿಕೊಂಡಿದೆ. ರಾಜ್ಯದಲ್ಲಿ ಬರ ಆವರಿಸಿಕೊಂಡಿದೆ. ಕಾಂಗ್ರೇಸ್ ಚುನಾವಣೆಯಲ್ಲಿ ಗೆಲ್ಲಲು ಮಾಡಿದ್ದ ಐದು ಗ್ಯಾರಂಟಿಗಳು ಈಗ ಹಳ್ಳಹಿಡಿಯುವ ಹಂತಕ್ಕೆ ತಲುಪಿದೆ. ರಾಜ್ಯದಲ್ಲಿ ವಿದ್ಯುತ್ ಅಭಾವದಿಂದ ರೈತರು, ಕೈಗಾರಿಕೆಗಳು ನಷ್ಟ ಅನುಭವಿಸುವಂತಾಗಿದೆ. ಬಿಜೆಪಿ ಆಡಳಿತದಲ್ಲಿದ್ದಾಗ ರೈತರು ಒತ್ತುವರಿ ಮಾಡಿದ ಕೃಷಿ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ಮುಂದಾಗಿತ್ತು. ಆದರೆ ಆ ಭೂಮಿಯನ್ನು ಕಾಂಗ್ರೆಸ್ ಸರಕಾರ ಕಿತ್ತುಕೊಳ್ಳಲು ಮುಂದಾಗಿದೆ. ಇಂತಹ ಅನೇಕ ಜನಪರ ಯೋಜನೆಗಳೆಲ್ಲಾ ಕಾಂಗ್ರೆಸ್ ಸರಕಾರ ಹೊಸಕು ಹಾಕಿ ಜನರ ಮೇಲೆ ಸವಾರಿ ಮಾಡುತ್ತಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾ ವಕ್ತಾರ ದೀಪಕ್ ದೊಡ್ಡಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಬಲಿಷ್ಟ ದೇಶವನ್ನಾಗಿ ಮಾಡುತ್ತಿದ್ದರೆ, ಕಾಂಗ್ರೆಸ್ನವರು ದೇಶವನ್ನು ದಿವಾಳಿಯನ್ನಾಗಿ ಮಾಡಲು ಮುಂದಾಗಿದ್ದಾರೆ. ಬಿಟ್ಟಿ ಭಾಗ್ಯ ಯೋಜನೆ ಘೋಷಿಸಿ, ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಗೃಹಲಕ್ಷಿ ಯೋಜನೆ 2ಸಾವಿರ ಹಣ ಶೇ.50 ರಷ್ಟು ಮಹಿಳೆಯರಿಗೆ ಇನ್ನೂ ಸಿಕ್ಕಿಲ್ಲ. ಅನ್ನಭಾಗ್ಯ ಯೋಜನೆ ಜಾರಿ ಮಾಡಲು ವಿಫಲರಾಗಿದ್ದಾರೆ. ಬಿಜೆಪಿ ಶೇ.40 ಪರ್ಸಂಟೇಜ್ ಎನ್ನುವವರು ಈಗ ಅವರದೇ ಪಕ್ಷದವರ ಮನೆಯಲ್ಲಿ ಕೋಟ್ಯಾಂತರ ರೂ ಹಣ ಐಟಿ ದಾಳಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು. ಅಲ್ಲದೇ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆಯುವುದರೊಳಗೆ ಭ್ರಷ್ಟಾಚಾರ ಮಿತಿಮೀರಿದೆ. ಐಟಿ ದಾಳಿಯಲ್ಲಿ ಕಾಂಗ್ರೇಸ್ ಪಕ್ಷದ ಸಂಪರ್ಕ ಹೊಂದಿರುವವರು ಸಿಕ್ಕಿಬಿದ್ದಿದ್ದಾರೆ. ಪಂಚರಾಜ್ಯಗಳ ಚುನಾವಣೆಗೆ ಹಣ ಹೊಂದಿಸಲು ಕಾಂಗ್ರೇಸ್ ರಾಜ್ಯದಲ್ಲಿ ಲೂಟಿಗಿಳಿದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಹಿಂದೆ 56 ಮಾರ್ಗಗಳಿಗೆ ಕೆಎಸ್ಆರ್ಟಿಸಿ ಬಸ್ ಓಡಾಡುತ್ತಿತ್ತು. ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆಯಿಂದ ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ 36 ಮಾರ್ಗಗಳಿಗೆ ಮಾತ್ರ ಬಸ್ ಸಂಚಾರ ನಿಗದಿಪಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅಮನುಭವಿಸುಂತಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿ.ಜೆ.ಪಿ. ತಾಲ್ಲೂಕು ಪದಾಧಿಕಾರಿಗಳು, ಪಟ್ಟಣ ಪಂಚಾಯಿತಿ ಹಾಲಿ ಮತ್ತು ಮಾಜಿ ಸದಸ್ಯರು, ವಿವಿಧ ಹೋಬಳಿಗಳ ಅಧ್ಯಕ್ಷರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.