ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯ ಕಿರುಗುಂದ ಗ್ರಾಮದ ಪರಿಶಿಷ್ಟ ಜಾತಿಯ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಆಕೆಯ ಪತಿಯೆ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.
ಕಿರುಗುಂದ ಗ್ರಾಮದ ಪದ್ಮಾಕ್ಷಿ (43 ವರ್ಷ) ಮೃತ ದುರ್ದೈವಿ. ಪದ್ಮಾಕ್ಷಿ ತನ್ನ ಮನೆಯ ಮುಂಭಾಗದಲ್ಲಿ ಬಿದ್ದಿದ್ದು, ಇಂದು ಬೆಳಿಗ್ಗೆ ಅಕ್ಕಪಕ್ಕದ ಮನೆಯವರು ಇದನ್ನು ಗಮನಿಸಿ ಪರಿಶೀಲಿಸಿದಾಗ ಆಕೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಆಕೆಯ ಪತಿ ಚಂದ್ರು ಮನೆಯೊಳಗೆ ಮಲಗಿರುವುದು ಕಂಡು ಬಂದಿತ್ತು.
ಪತಿ ಚಂದ್ರು ಕುಡಿದ ಮತ್ತಿನಲ್ಲಿ ತನ್ನ ಪತ್ನಿಯನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿ, ಅಂಗಳಕ್ಕೆ ನೂಕಿರಬಹುದು ಎಂದು ಶಂಕಿಸಲಾಗಿದೆ. ಚಂದ್ರು ನನ್ನು ಗೋಣಿಬೀಡು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಗಳು ಪ್ರತಿದಿನ ಮನೆಯಲ್ಲಿ ಜಗಳವಾಡಿಕೊಳ್ಳುತ್ತಿದ್ದರು, ಪತಿ ಚಂದ್ರು ಮದ್ಯ ವ್ಯಸನಿಯಾಗಿದ್ದ ಮತ್ತು ತನ್ನ ಪತ್ನಿಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗಳು ವಿದ್ಯಾಭ್ಯಾಸ ಮೊಟಕುಗೊಳಿಸಿ ಮನೆಯಲ್ಲಿಯೇ ಇದ್ದು, ಇನ್ನೋರ್ವ ಮಗಳು ಬೇಲೂರು ಹಾಸ್ಟೆಲ್ ನಲ್ಲಿ ಇದ್ದುಕೊಂಡು ಹೈಸ್ಕೂಲ್ ವ್ಯಾಸಾಂಗ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ. ನಿನ್ನೆ ಮಗಳು ಸಂಬಂಧಿಕರ ಮನೆಗೆ ತೆರಳಿದ್ದಳು ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇದ್ದರು ಎನ್ನಲಾಗಿದೆ.
ಪ್ರತಿದಿನದಂತೆ ನಿನ್ನೆ ರಾತ್ರಿಯೂ ದಂಪತಿಗಳು ಗಲಾಟೆ ಮಾಡಿಕೊಂಡಿದ್ದು ಪತಿ ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಹಲ್ಲೆ ಮಾಡಿ ಮನೆಯಿಂದ ಆಚೆ ನೂಕಿರಬಹುದು ಆಗ ಆಕೆ ಪ್ರಾಣ ಬಿಟ್ಟಿರಬಹುದು ಎಂದು ಶಂಕಿಸಲಾಗಿದೆ. ಪತಿ ಮನೆಮುಂದಿನ ಅಂಗಳದಲ್ಲಿ ಪ್ರಾಣಬಿಟ್ಟು ಬಿದ್ದಿದ್ದರೂ ಸಹ ಅದರ ಪರಿವೆಯೇ ಇಲ್ಲದಂತೆ ಗಂಡ ಚಂದ್ರು ನಶೆಯ ಮತ್ತಿನಲ್ಲಿ ಮನೆಯೊಳಗೆ ಮಲಗಿದ್ದ.
ಇದು ಮೇಲ್ನೋಟಕ್ಕೆ ಪತಿಯೇ ಮಾಡಿರುವ ಕೊಲೆ ಎಂದು ಕಂಡುಬರುತ್ತಿದೆ ಆದರೆ ಸಾವಿಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.