ವಿಶ್ವಕರ್ಮ ಜನಾಂಗದಿಂದ ಶಿಲ್ಪ ಕಲೆಗಳ ಮೂಲಕ ಇಡೀ ಜಗತ್ತಿಗೆ ಈ ದೇಶದ ಪರಂಪರೆ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಅಂತಹ ಕಲೆಯನ್ನು ಮುಂದಿನ ಪೀಳಿಗೆ ಮುಂದುವರೆಸಲು ವಿಶ್ವಕರ್ಮ ಜನಾಂಗ ಶ್ರಮಿಸಬೇಕೆಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದ ತಾ.ಪಂ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ವಿಶ್ಚಕರ್ಮ ಸಮಾಜ ಸೇವಾ ಸಭಾ ವತಿಯಿಂದ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾನು ವಿದ್ಯಾರ್ಥಿ ದೆಸೆಯಲ್ಲಿ ವಿಶ್ವಕರ್ಮ ಜನಾಂಗದ ಮನೆತನದಲ್ಲಿ ಬೆಳೆದಿದ್ದೇನೆ. ಅವರ ಆಚಾರ, ವಿಚಾರ, ಸಂಸ್ಕೃತಿ ತನ್ನ ಮೇಲೆ ಬಹಳಷ್ಟು ಪರಿಣಾಮ ಬೀರಿದ್ದರಿಂದ ಅವರ ವಿಚಾರವನ್ನು ಇಂದಿಗೂ ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ. ನಮ್ಮ ದೇಶದಲ್ಲಿ ವಿಶ್ವಕರ್ಮ ಜನಾಂಗದ ಸಂಖ್ಯೆ ಕಡಿಮೆ ಇದ್ದರೂ ಸಂಘಟಿತರಾಗಿ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಬೇಕು. ತಾನು ಬಹುತೇಕ ಕಾರ್ಯಕ್ರಮಗಳಿಗೆ ಬೇಟಿ ನೀಡಿದ್ದಾಗ ಮಹಿಳೆಯರ ಸಂಖ್ಯೆ ಎಲ್ಲಿ ಅಧಿಕವಾಗುತ್ತಿತ್ತೋ ಆ ಸಮಾಜ ಪ್ರಗತಿ ಕಾಣುತ್ತಿದೆ ಎಂದರ್ಥ. ಅದೇ ರಿತಿಯಲ್ಲಿ ಇಲ್ಲಿಯೂ ಮಹಿಳೆಯರ ಸಂಖ್ಯೆ ಅಧಿಕವಾಗಿರುವುದು ಸಂತಸ ತಂದಿದೆ. ಸಾಮಾನ್ಯವಾಗಿ ಜನಪ್ರತಿನಿಧಿಗಳು ಜಾತಿ ಲೆಕ್ಕಾಚಾರದಲ್ಲಿ ರಾಜಕೀಯ ನಡೆಸುತ್ತಾರೆ. ಆದರೆ ತಾನು ಮೀಸಲು ಕ್ಷೇತ್ರದ ಶಾಸಕನಾಗಿದ್ದರೂ ಹೊಸ ವಿಚಾರವನ್ನಿಟ್ಟುಕೊಂಟು ಎಲ್ಲಾ ಜನಾಂಗದ ಏಳಿಗೆಗೆ ಶ್ರಮಿಸುತ್ತೇನೆಂದು ಹೇಳಿದರು.
ನಿವೃತ್ತ ಉಪನ್ಯಾಸಕ ಶೃಂಗೇರಿಯ ಕೆ.ಆರ್.ಭಾಸ್ಕರ್ ಆಚಾರ್ಯ ಮಾತನಾಡಿ, ಎಲ್ಲಾ ಸಮುದಾಯದ ಜನರ ಜತೆ ಸಹ ಬಾಳ್ವೆಯಿಂದ ಸಾಗುವ ಮನೋಭಾವ ವಿಶ್ವಕರ್ಮ ಜನಾಂಗದವರಿಗೆ. ದೇಶದ ಸಂಸ್ಕೃತಿ ಬಗ್ಗೆ ಚಿತ್ರಿಸುವ ಮಹಾನ್ ಕಾರ್ಯ ಮಾಡಿರುವ ವಿಶ್ವ ಕರ್ಮ ಸಮಾಜ ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದೆ ಉಳಿದಿದ್ದಾರೆ. ಹಾಗಾಗಿ ಸದಾ ಎಲ್ಲಾ ಸಮಾಜದ ಒಳಿತನ್ನು ಬಯಸುವ ವಿಶ್ವಕರ್ಮ ಜನಾಂಗ ಸಂಘಟಿತರಾಗಿ ರಾಜಕೀಯವಾಗಿ ಬೆಳೆದು ದೇಶ ಹಾಗೂ ಸಮಾಜ ಕಟ್ಟುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿಶ್ವ ಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕುಮಾರಿ ನಿತ್ಯ ಅವರಿಂದ ಭರತನಾಟ್ಯ ನೃತ್ಯ ಸಾರ್ವಜನಿಕರನ್ನು ರಂಜಿಸಿತು.
ಮಾಜಿ ಸಚಿವೆ ಮೋಟಮ್ಮ, ವಿಶ್ವಕರ್ಮ ಸಮಾಜ ಸೇವಾ ಸಭಾದ ಜಿಲ್ಲಾಧ್ಯಕ್ಷ ಚೇತನ್ಕುಮಾರ್, ತಾಲೂಕು ಅಧ್ಯಕ್ಷ ಎಚ್.ಪಿ.ಮಂಜುನಾಥ್ ಮಾತನಾಡಿದರು.
ಪ.ಪಂ. ಸದಸ್ಯರಾದ ಆಶಾ ಮೋಹನ್, ಎಚ್.ಪಿ.ರಮೇಶ್, ಕಮಲಾಕ್ಷಿ, ತಹಸೀಲ್ದಾರ್ ತಿಪ್ಪೇಸ್ವಾಮಿ, ವಿಶ್ವಕರ್ಮ ಸಮಾಜ ಸೇವಾ ಸಭಾದ ಮಹಿಳಾ ಮಂಡಳಿ ಅಧ್ಯಕ್ಷೆ ಚಂದ್ರಾವತಿ, ಗೌರವಾಧ್ಯಕ್ಷರಾದ ವಿಠಲ್ ಆಚಾರ್ಯ, ಮಂಜುನಾಥ್, ಪುಷ್ಪ, ಪುರೋಹಿತ ರತ್ನಾಕರ ಆಚಾರ್ಯ, ಗಣಪತಿ ಆಚಾರ್ಯ, ಅಣ್ಣೇಗೌಡ ಮತ್ತಿತರರಿದ್ದರು.