ಚಿಕ್ಕಮಗಳೂರು ನಗರದ ಮೂರು ಕಡೆಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 7.60 ಲಕ್ಷ ರೂ ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಉಪವಿಭಾಗಾಧಿಕಾರಿ ರಾಜೇಶ್, ಚಿಕ್ಕಮಗಳೂರು ತಹಸಿಲ್ದಾರ್ ಮತ್ತು ಬಸವನಹಳ್ಳಿ ಹಾಗೂ ನಗರ ಠಾಣೆ ಪಿಎಸ್ಐ, ಸಿಬ್ಬಂದಿ ಹಾಗೂ ಅಗ್ನಿಶಾಮಕ ಇಲಾಖೆಯ ಸಹಯೋಗದೊಂದಿಗೆ ಈ ದಾಳಿ ನಡೆಸಲಾಗಿದೆ.
ಚಿಕ್ಕಮಗಳೂರು ನಗರದ ಮೂರು ಸ್ಥಳಗಳಲ್ಲಿ ಗೋಡೌನ್ ಗಳಲ್ಲಿ ಪರವಾನಿಗೆ ಇಲ್ಲದೆ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಲಾಗಿತ್ತು .
ಹಾಲೆನಹಳ್ಳಿ ವಿಜಯದುರ್ಗ ದೇವಸ್ಥಾನದ ಒಳಭಾಗದಲ್ಲಿರುವ ಗೋಡೌನ್ ನಲ್ಲಿ 4 ಲಕ್ಷ ಮೌಲ್ಯದ 1000 ಕೆಜಿ ಪಟಾಕಿ ದೊರಕಿದೆ.
ಶರೀಫ್ ಗಲ್ಲಿ ಗೋದಾಮಿನಲ್ಲಿ 3,50000/- ರೂ ಮೌಲ್ಯದ 684 ಕೆಜಿ ಪಟಾಕಿ ಸಿಕ್ಕಿದೆ.
ನಗರದ ಬಿ.ಎಮ್ ರಸ್ತೆ ಮಂಜುನಾಥ ಸ್ವಾಮಿ ಸ್ಟೋರ್ಸ್ ನಲ್ಲಿ 10000/- ರೂ ಮೌಲ್ಯದ 25 ಕೆಜಿ ಪಟಾಕಿ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರು ಸಮೀಪ ಪಟಾಕಿ ಗೋಡಾನ್ ಅಗ್ನಿ ಅವಘಡ ಸಂಭವಿಸಿ 14 ಮಂದಿ ಸಾವನ್ನಪ್ಪಿದ ಘಟನೆ ನಡೆದ ನಂತರ ಸರ್ಕಾರ ಅಕ್ರಮ ಮತ್ತು ಅಸುರಕ್ಷಿತವಾಗಿ ಪಟಾಕಿ ಸಂಗ್ರಹದ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಿದೆ.