ತಮ್ಮ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಪಿಕಪ್ ವಾಹನ ಖರೀದಿಸಲು ಬಯಸುವ ರೈತರಿಗೆ ಪಿ.ಸಿ.ಎ.ಆರ್.ಡಿ. ಬ್ಯಾಂಕ್ ವತಿಯಿಂದ ಶೇಕಡಾ 4 ಬಡ್ಡಿಯಲ್ಲಿ ರೂ. 7 ಲಕ್ಷದ ವರೆಗೆ ಸಾಲ ಸೌಲಭ್ಯ ವಿತರಿಸಲಾಗುವುದು ಎಂದು ಮೂಡಿಗೆರೆ ಪಿ.ಸಿ.ಎ.ಆರ್.ಡಿ. ಬ್ಯಾಂಕ್ ಅಧ್ಯಕ್ಷ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ ತಿಳಿಸಿದ್ದಾರೆ.
ಅವರು ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ್ದು, ಸರ್ಕಾರವು ಪಶ್ಚಿಮಘಟ್ಟದ ಸಾಲುಗಳಲ್ಲಿ ಬರುವ ಗುಡ್ಡಗಾಡು ಪ್ರದೇಶದ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ ಮತ್ತು ಉಡುಪಿ ಜಿಲ್ಲೆಗಳ ರೈತರಿಗೆ ಈ ಯೋಜನೆಯನ್ನು ಜಾರಿಗೆ ತಂದಿದೆ.
ಈ ಜಿಲ್ಲೆಗಳ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸಾಗಿಸಲು, ಕೃಷಿ ಕಾರ್ಯಗಳಿಗೆ ಪೂರಕವಾದ ಕೆಲಸಗಳ ಅನುಕೂಲಕ್ಕಾಗಿ ಪಿಕಪ್ ವಾಹನಗಳನ್ನು ಖರೀದಿಸಲು ಸರ್ಕಾರ ಪ್ರೋತ್ಸಾಹದ ರೂಪದಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಹಿಂದೆ ಈ ಯೋಜನೆ ಜಾರಿಯಲ್ಲಿತ್ತಾದರೂ 2010ರಿಂದ ಯೋಜನೆ ಸ್ಥಗಿತಗೊಂಡಿತ್ತು. ಇದೀಗ ರೈತರ ಮತ್ತು ಸಹಕಾರಿಗಳ ಹೋರಾಟದ ಫಲವಾಗಿ ಈ ಯೋಜನೆ ಮತ್ತೆ ಜಾರಿಗೆ ಬಂದಿದೆ.
ಈ ಯೋಜನೆಯು ರೈತಾಪಿ ವರ್ಗದವರಿಗೆ ಮಾತ್ರ ಅನ್ವಯವಾಗುತ್ತದೆ. ವಿಶೇಷವಾಗಿ ಕಾಫಿ, ಅಡಿಕೆ ಬೆಳೆಯುವ ಪ್ರದೇಶಗಳ ರೈತರಿಗೆ ಪಿಕಪ್ ವಾಹನದ ಅವಶ್ಯಕತೆ ತುಂಭಾ ಇರುತ್ತದೆ. ಆರ್ಥಿಕ ಹೊರೆ ಮತ್ತು ಅಧಿಕ ಬಡ್ಡಿಯಿಂದ ರೈತರು ಇದುವರೆಗೂ ಪಿಕಪ್ ವಾಹನ ಖರೀದಿಸಲು ಹಿಂದೇಟು ಹಾಕುವಂತಾಗಿತ್ತು.
ಇದೀಗ ರೈತರಿಗೆ ಒಂದು ಸುವರ್ಣ ಅವಕಾಶ ದೊರಕಿದೆ. ಶೇಕಡಾ 4ರ ಬಡ್ಡಿಯಲ್ಲಿ ರೂ. 7 ಲಕ್ಷದ ವರೆಗೆ ಸಾಲ ಸೌಲಭ್ಯವನ್ನು ನೀಡಲಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಳಸೆ ಶಿವಣ್ಣ ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗೆ ತಮ್ಮ ತಮ್ಮ ತಾಲ್ಲೂಕು ವ್ಯಾಪ್ತಿಯ ಪಿ.ಸಿ.ಎ.ಆರ್.ಡಿ. ಬ್ಯಾಂಕ್ ಗಳ ಶಾಖೆಗೆ ಭೇಟಿ ನೀಡಿ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.