ಮೂಡಿಗೆರೆ ತಾಲೂಕಿನ ಚಕ್ಕುಡಿಗೆ ಗ್ರಾಮದ ಸರಕಾರಿ ರುದ್ರಭೂಮಿಯಲ್ಲಿರುವ ಮರಗಳನ್ನು ಸಾಮಾಜಿಕ ಅರಣ್ಯ ಇಲಾಖೆ ನಾಶಪಡಿಸಿ, ಗಿಡಗಳನ್ನು ನೆಟ್ಟು ಸ್ಮಶಾನ ಜಾಗವನ್ನು ಹಾಳು ಮಾಡಲಾಗಿದೆ ಎಂದು ಇತ್ತೀಚೆಗೆ ಚಕ್ಕುಡಿಗೆಯ ಕೆಲ ಗ್ರಾಮಸ್ಥರು ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿರುವ ಸಂಗತಿ ಸತ್ಯಕ್ಕೆ ದೂರವಾಗಿದೆ ಎಂದು ಚಕ್ಕುಡಿಗೆ ಗ್ರಾಮದ ಪೂರ್ಣೇಶ್ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಕ್ಕುಡಿಗೆ ಗ್ರಾಮದ ಸರ್ವೆ ನಂ 9ರಲ್ಲಿ 1.05 ಎಕರೆ ಸರಕಾರಿ ರುದ್ರಭೂಮಿ ಇದ್ದು, ಕೇವಲ 20 ಗುಂಟೆ ಜಾಗ ಬಿಟ್ಟರೆ ಬೇರೆಲ್ಲಾ ಜಾಗ ಒತ್ತುವರಿಯಾಗಿದೆ. ಈ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಹಸಿರು ಕ್ರಾಂತಿ ಯೋಜನೆಯಡಿ ಸುಮಾರು 250 ಗಿಡ ನೆಟ್ಟಿದ್ದಾರೆ. ಇದಕ್ಕೆ ಕಿರುಗುಂದ ಗ್ರಾ.ಪಂ.ಯಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಂಡು ಒಪ್ಪಿಗೆ ನೀಡಲಾಗಿದೆ. ಸರಕಾರಿ ಭೂಮಿ ಅಭಿವೃದ್ಧಿಪಡಿಸಲು ಗ್ರಾಮಸ್ಥರ ಒಪ್ಪಿಗೆ ಬೇಕಾಗಿಲ್ಲ. ಅಲ್ಲಿ ಯಾವುದೇ ಜೆಸಿಬಿಯಲ್ಲಿ ಕೆಲಸ ಮಾಡಿಲ್ಲ. ಅಲ್ಲಿ ಯಾವ ಹಳೆ ಮರಗಳನ್ನು ತೆರವುಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಸ್ಮಶಾನದಲ್ಲಿ ಮುಳ್ಳು ಗಿಡಗಳು ಬೆಳೆದಿದ್ದರಿಂದ ಗ್ರಾಮಸ್ಥರು ಗದ್ದೆ ತೋಟಕ್ಕೆ ತೆರಳಲು ಭಯವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಗ್ರಾಮಸ್ಥರೆ ಮುಳ್ಳಿನ ಗಿಡಗಳನ್ನು ತೆರವುಗೊಳಿಸಿದ್ದೇವೆಂದು. ಸ್ಮಶಾನಕ್ಕೆ 12 ದಿನದ ಕಾರ್ಯಕ್ಕಾಗಿ ಮಾತ್ರ ಕುಟುಂಬಸ್ತರು ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆಯೆ ಹೊರತು ಪ್ರತಿ ವರ್ಷ ಯಾರೂ ಸ್ಮಶಾನಕ್ಕೆ ಬಂದು ಪೂಜೆ ಮಾಡುವುದಿಲ್ಲ. ಅಲ್ಲಿ ಸ್ಮಶಾನ ಭೂಮಿ ಒತ್ತುವರಿ ಮಾಡಿಕೊಂಡಿದ್ದರಿಂದ ತಮ್ಮ ಭೂಮಿ ಎಲ್ಲಿ ವಶಪಡಿಸಿಕೊಳ್ಳುತ್ತಾರೆಂಬ ಕಾರಣಕ್ಕೆ ಸ್ಮಶಾನ ಭೂಮಿ ಉಳಿಸಿಕೊಡುವಂತೆ ಸುಳ್ಳು ಸುದ್ದಿ ಹರಡಿಸಿದ್ದಾರೆ. ಸ್ಮಶಾನ ಭೂಮಿ ಒತ್ತುವರಿ ಖುಲ್ಲಾಗೊಳಿಸಲು ಗ್ರಾ.ಪಂ. ಮತ್ತು ತಾಲೂಕು ಕಚೇರಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಕಿರುಗುಂದ ಗ್ರಾ.ಪಂ. ಮಾಜಿ ಅಧ್ಯಕ್ಷ ವೆಂಕಟೇಶ್, ಗ್ರಾಮಸ್ಥರಾದ ಪುಟ್ಟಸ್ವಾಮಿ, ಪ್ರಕಾಶ್, ಉಮೇಶ್, ಲಕ್ಷ್ಮಣ್ ಉಪಸ್ಥಿತರಿದ್ದರು.