ಪಶುವೈದ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದೆ ಪಶುವೈದ್ಯ ಇಲಾಖೆ ಅಧಿಕಾರಿ ಲಿಯೋ ಸುದೇಶ್ ಅವರಿಗೆ ಮೂಡಿಗೆರೆಯಲ್ಲಿ ನಾಗರೀಕ ಸನ್ಮಾನ ಏರ್ಪಡಿಸಲಾಗಿತ್ತು.
ಅಕ್ಟೋಬರ್ 2ರಂದು ಮೂಡಿಗೆರೆ ಅಡ್ಯಂತಾಯ ಅವೆನ್ಯೂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮೂಡಿಗೆರೆ ಸಮಾನ ಮನಸ್ಕರ ವೇದಿಕೆ ಮತ್ತು ಸಾರ್ವಜನಿಕರ ಪರವಾಗಿ ನಿವೃತ್ತ ಅಧಿಕಾರಿ ಲಿಯೋ ಸುದೇಶ್ ದಂಪತಿಗಳಿಗೆ ಗೌರವ ಸನ್ಮಾನ ನೀಡಲಾಯಿತು.
ಮೂಡಿಗೆರೆ ತಾಲ್ಲೂಕು ಪಶುವೈದ್ಯ ಆಸ್ಪತ್ರೆಯಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಲಿಯೋ ಸುದೇಶ್ ಅವರು 1986ರಿಂದ ಪಶುವೈದ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಆರಂಭದಲ್ಲಿ ಮಾಕೋನಹಳ್ಳಿ ಪಶುವೈದ್ಯ ಆಸ್ಪತ್ರೆಯಲ್ಲಿ ಪಶುವೈದ್ಯ ಪರೀಕ್ಷಕರಾಗಿ ಸೇವೆ ಅರಂಭಿಸಿದ ಇವರು ನಂತರ ಜಾವಳಿ, ಮೂಡಿಗೆರೆ, ಕುಂದೂರು, ಉಡುಪಿ, ಬ್ರಹ್ಮಾವರ, ಕಳಸ ಮುಂತಾದ ಕಡೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
2018ರಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿಯಾಗಿ ಪದೋನ್ನತಿ ಹೊಂದಿ ಮೂಡಿಗೆರೆ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದರು.
ಇವರು ಸೇವೆ ಸಲ್ಲಿಸಿದ ಕಡೆಗಳಲ್ಲಿ ಎಲ್ಲಾ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡಿ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಮೂಡಿಗೆರೆ ಸುತ್ತಮುತ್ತಲ ಜನರಿಗೆ ಇವರು ಚಿರಪರಿಚಿತರಾಗಿದ್ದರು. ಇವರ ಸೇವಾ ಮನೋಭಾವನೆಯನ್ನು ಗುರುತಿಸಿ ಮೂಡಿಗೆರೆ ಸಮಾನ ಮನಸ್ಕರ ವೇದಿಕೆಯಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮೂಡಿಗೆರೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ, ಮೂಡಿಗೆರೆ ಜೇಸಿಯ ಮಾಜಿ ಅಧ್ಯಕ್ಷರಾದ ಡಾ. ರಾಮಚರಣ ಅಡ್ಯಂತಾಯ, ಬಿ.ಕೆ. ಜಗ್ಮೋಹನ್, ಬಿ.ಎನ್. ಮನಮೋಹನ್, ಮಗ್ಗಲಮಕ್ಕಿ ಗಣೇಶ್, ಎಂ.ಬಿ. ಶಶಿಕರಣ್, ಬಿ.ಜೆ.ಪಿ. ಮುಖಂಡರಾದ ಎಂ.ಆರ್. ಜಗದೀಶ್, ದೀಪಕ್ ದೊಡ್ಡಯ್ಯ, ಜೆ.ಎಸ್.ರಘು, ಪ್ರಮೋದ್ ದುಂಡುಗ, ಪಂಚಾಕ್ಷರಿ, ಲಯನ್ಸ್ ಮಾಜಿ ಅಧ್ಯಕ್ಷ ಪ್ರದೀಪ್, ರೋಟರಿ ಮಾಜಿ ಅಧ್ಯಕ್ಷ ಪ್ರದೀಪ್ ದುಂಡುಗ, ರೋಟರಿ ಅಧ್ಯಕ್ಷ ಕೆ.ಎಲ್.ಎಸ್. ತೇಜಸ್ವಿ, ಜೇಸಿಐ ಅಧ್ಯಕ್ಷೆ ಸವಿತಾ ರವಿ, ಜೇಸಿಐ ಮಾಜಿ ಕಾರ್ಯದರ್ಶಿ ಹರ್ಷವರ್ಧನ್ ಚಕ್ಕಮಕ್ಕಿ, ಬಂಟರ ಸಂಘ, ಕ್ರಿಶ್ಚಿಯನ್ ಸಂಘದ ಪದಾಧಿಕಾರಿಗಳು, ಪಶುವೈದ್ಯ ಇಲಾಖೆಯ ಸಹೋದ್ಯೋಗಿಗಳು ಉಪಸ್ಥಿತರಿದ್ದರು.
ಅತಿಥಿಗಳು ಲಿಯೋ ಸುದೇಶ್ ಅವರ ಸೇವಾ ಮನೋಭಾವನೆಯನ್ನು ಸ್ಮರಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಲಿಯೋ ಸುದೇಶ್ ಮೂಡಿಗೆರೆ ಜನರು ತಮಗೆ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಬಿ.ಕೆ. ಜಗ್ಮೋಹನ್ ಮತ್ತು ಕಾರ್ಯದರ್ಶಿ ಬಿ.ಎನ್. ಮನಮೋಹನ್ ಕಾರ್ಯಕ್ರಮ ಆಯೋಜನೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದರು.