ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಕಳಸ ತಾಲ್ಲೂಕು ಕೇಂದ್ರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಳಸ ಪಟ್ಟಣದಲ್ಲಿ ಭಾಗಶಃ ಬಂದ್ ಕಂಡುಬಂದಿತು. ಕೆಲವು ಅಂಗಡಿ ಮುಗ್ಗಟ್ಟುಗಳು ತೆರೆದೇ ಇದ್ದವು. ಮತ್ತೆ ಕೆಲವು ಅಂಗಡಿಗಳು ಅಂಗಡಿ ಬಂದ್ ಮಾಡಿ ಸ್ವಯಂಪ್ರೇರಿತರಾಗಿ ಕಾವೇರಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಡಾ. ರಾಜ್ ಕುಮಾರ್ ಕನ್ನಡ ಸಂಘದ ಕಳಸ ತಾಲ್ಲೂಕು ಅಧ್ಯಕ್ಷರಾದ ಕನ್ನಡ ರಾಜು ಅವರು ಬ್ಲೇಡ್ ನಿಂದ ತಮ್ಮ ಕೈನರವನ್ನು ಕೊಯ್ದುಕೊಂಡು ರಕ್ತವನ್ನು ಹರಿಸುತ್ತಾ ಕಾವೇರಿಗಾಗಿ ಮತ್ತು ಕನ್ನಡಕ್ಕಾಗಿ ನಮ್ಮ ರಕ್ತವನ್ನು ಕೊಡಲು ಸಿದ್ಧರಿದ್ದೇವೆ ಎಂದು ಭಾವೋದ್ವೇಗದಿಂದ ಘೋಷಣೆಗಳನ್ನು ಕೂಗಿದರು. ಸ್ಥಳದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು. ನಂತರ ಸ್ಥಳದಲ್ಲಿದ್ದ ಪೊಲೀಸರು ಮತ್ತು ಕಾರ್ಯಕರ್ತರು ರಾಜು ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದುರು. ಅಲ್ಲಿ ರಾಜು ಅವರ ಕೈಗಾಗಿದ್ದ ಗಾಯಕ್ಕೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಯಿತು.
ಪ್ರತಿಭಟನೆ ಮೆರವಣಿಗೆಯಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಡಿ.ಆರ್. ದುಗ್ಗಪ್ಪಗೌಡ, ರೈತಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಪಿ. ರಾಜು, ಕಾರ್ಯದರ್ಶಿ ಸವಿಂಜಯ, ಮುಖಂಡರಾದ ಡಿ.ಬಿ. ಜಯಪಾಲ್, ಲಕ್ಷ್ಮಣಗೌಡ, ಜೆ.ಡಿ.ಎಸ್. ರೈತಮೋರ್ಚಾ ಕಳಸ ತಾಲ್ಲೂಕು ಅಧ್ಯಕ್ಷ ಎನ್.ಸಿ. ನಾರಾಯಣಗೌಡ ಸೇರಿದಂತೆ ರೈತ ಸಂಘ, ವಿವಿಧ ರಾಜಕೀಯ ಪಕ್ಷಗಳು ಮತ್ತು ಕನ್ನಡ ಪರ ಸಂಘಟನೆಗಳ ಹಲವು ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.