ಕಾವೇರಿ ಹೋರಾಟಕ್ಕೆ ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದ ಹಿನ್ನಲೆಯಲ್ಲಿ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ಕೊಟ್ಟಿಗೆಹಾರ, ಬಣಕಲ್, ಚಕ್ಕಮಕ್ಕಿ, ಬಗ್ಗಸಗೋಡು, ಸಬ್ಬೇನಹಳ್ಳಿ, ಹೊರಟ್ಟಿ ಸೇರಿದಂತೆ ಹಲವೆಡೆ ಅಂಗಡಿ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚಿ ಬಂದ್ ಮಾಡಿದರು.
ಸದಾ ಜನಿರಂದ ಗಿಜಿಗುಡುತ್ತಿದ್ದ ಕೊಟ್ಟಿಗೆಹಾರ, ಮತ್ತು ಬಣಕಲ್ ಸ್ಥಬ್ದವಾಗಿ ಬಂದ್ ಯಶಸ್ವಿಯಾಯಿತು.
ಕನ್ನಡ ಸೇನೆಯ ತಾಲ್ಲೂಕು ಅಧ್ಯಕ್ಷ ಹೊರಟ್ಟಿ ರಘು, ತಾಲ್ಲೂಕು ಕಾರ್ಯದರ್ಶಿ ರಾಜು, ರೈತ ಸಂಘದ ರಾಜ್ಯ ಮಹಿಳಾ ಉಪಾಧ್ಯಕ್ಷೆ ವನಶ್ರೀಲಕ್ಷ್ಮಣ್, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಟಿ.ಎಂ.ಆದರ್ಶ್ , ಕರವೇ ಬಣಕಲ್ ಹೋಬಳಿ ಅಧ್ಯಕ್ಷ ಯಾಕೂಬ್ ಮತ್ತಿತರರು ಬಂದ್ ಯಶಸ್ವಿಗೆ ಜನರ ಬೆಂಬಲವನ್ನು ಅಭಿನಂದಿಸಿದರು.
ಸ್ಥಳೀಯ ಆಟೋ ಸಂಘಟನೆಗಳು, ವರ್ತಕರ ಸಂಘ, ಗೆಳೆಯರ ಬಳಗ, ಬಣಕಲ್ ಪ್ರೆಂಡ್ಸ್ ಕ್ಲಬ್,ರೈತ ಸಂಘ ಹಾಗೂ ಮತ್ತಿತರ ಪ್ರಗತಿಪರ ಸಂಘಟನೆಗಳು, ರಾಜಕೀಯ ಸಂಘಟನೆಗಳು ಕೂಡ ಬಂದ್ ಯಶಸ್ವಿಯಾಗಲು ಕೈಜೋಡಿಸಿದವು. ‘ಕಾವೇರಿ ನೀರು ನಮ್ಮ ಹಕ್ಕು,ನಾವು ಬಾಯಾರಿಕೊಂಡು ಇರುವಾಗ ಬೇರೆ ರಾಜ್ಯದವರ ಬಾಯಾರಿಕೆ ತಣಿಸಲು ಸಾಧ್ಯವಿಲ್ಲ.ನಮಗೆ ಕುಡಿಯಲು ಸಮರ್ಪಕ ನೀರಿದ್ದರೆ ಮಾತ್ರ ತಮಿಳುನಾಡಿಗೆ ನೀರು ಹಾಯಿಸಲು ಸಾಧ್ಯವಾಗುತ್ತದೆ.ಈ ವಿಷಯದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸಬೇಕು ಎಂದು ಕನ್ನಡ ಸೇನೆಯ ತಾಲ್ಲೂಕು ಅಧ್ಯಕ್ಷ ಹೊರಟ್ಟಿ ರಘು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.