ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಭೂ ಮಂಜೂರಿ ಕರ್ಮಕಾಂಡಗಳು ಬೆಚ್ಚಿಬೀಳಿಸುವಂತಿದೆ.
ಅಕ್ರಮವಾಗಿ ಭೂಮಿ ಮಂಜೂರಿ ಪ್ರಕರಣದಲ್ಲಿ ಈಗಾಗಲೇ ನಾಲ್ವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಅದಲ್ಲಿ ಇಬ್ಬರು ಗ್ರಾಮ ಲೆಕ್ಕಿಗರನ್ನು ಅರೆಸ್ಟ್ ಮಾಡಲಾಗಿದೆ.
ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಹಾದಿಯೋಣಿ ಎಂಬ ಗ್ರಾಮದ ಸರ್ವೇ ನಂಬರ್ 21ರಲ್ಲಿ ಒಂದೇ ಕುಟುಂಬಕ್ಕೆ ಸುಮಾರು 32 ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ಹೀಗೆ ಭೂಮಿ ಮಂಜೂರಿ ಮಾಡಿಕೊಂಡಿರುವವರು ಬಹುತೇಕರು ಈ ದೇಶದಲ್ಲಿಯೇ ಇಲ್ಲ. ಅವರೆಲ್ಲಾ ವಿದೇಶದಲ್ಲಿ ವಾಸವಾಗಿದ್ದಾರೆ.
ಒಂದೇ ಕುಟುಂಬದ 7 ಮಂದಿಗೆ ಭೂಮಿ ಮಂಜೂರಿ ಮಾಡಿಕೊಡಲಾಗಿದ್ದು ಅವರಲ್ಲಿ ಕೆಲವರು ಆಸ್ಟ್ರೇಲಿಯ ಮತ್ತು ಅಮೇರಿಕಾದಲ್ಲಿ ವಾಸವಾಗಿದ್ದಾರೆ. ಇನ್ನು ಕೆಲವರು ಮುಂಬೈ, ಬೆಂಗಳೂರು ಮತ್ತು ಮಂಗಳೂರು ನಿವಾಸಿಗಳಾಗಿದ್ದಾರೆ.
ಅಂತೋಣಿ ಜೆ.ಡಿ. ಪಿಂಟೋ, ಹುಬ್ರಾಟ್ ವಾಜ್, ಹಿರೋ ಎ.ಎಂ.ಎಲ್. ವಾಜ್, ಜೋಷ್ ಫಿನ್ ಸುನಿತಿ ಕಾಮತ್, ಶೀಲಾ ಅಲ್ಬೂ ಕ್ಯೂ ಕ್ಕ್, ಜೋಸ್ನಾ ಕಾಸರಗೋಡು ಫಾಲಟ್, ಶೆರಿಲ್ಲಾ ಡಿ.ಸೋಜಾ ಎಂಬುವವರ ಹೆಸರಿಗೆ ತಲಾ 4 ಎಕರೆಗಿಂತಲೂ ಅಧಿಕ ಸರ್ಕಾರಿ ಭೂಮಿಯನ್ನು ಮಂಜೂರಿ ಮಾಡಿಕೊಡಲಾಗಿದೆ.
ಇವುಗಳಲ್ಲಿ ಯಾರದೂ ಸಹ ಫಾರಂ 50, 53 ಅರ್ಜಿಗಳು ಇಲ್ಲ, ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಡನೆಯಾಗಿಲ್ಲ, ಯಾವುದೇ ನಿಮಯಗಳನ್ನು ಅನುಸರಿಸಿಲ್ಲ.
ಅಂದು ಬಾಳೂರು ಹೋಬಳಿ ವಿಲೇಜ್ ಅಕೌಂಟೆಂಟ್ ಆಗಿದ್ದ ಮತ್ತು ಇನ್ ಚಾರ್ಜ್ ರೆವೆನ್ಯೂ ಇನ್ಸ್ ಫೆಕ್ಟರ್ ಆಗಿದ್ದ ಗಿರೀಶ್, ಅಂದಿನ ತಹಸೀಲ್ದಾರ್ ಆಗಿದ್ದ ರಮೇಶ್, ಆರ್.ಆರ್.ಟಿ. ಶಿರಸ್ತೇದಾರ್ ಆಗಿದ್ದ ಪಾಲಯ್ಯ ಇವರುಗಳು ಸೇರಿ ನೇರವಾಗಿ ಮ್ಯುಟೇಷನ್ ಕ್ರಿಯೇಟ್ ಮಾಡಿ ಪಹಣಿ ಮಾಡಿಕೊಟ್ಟಿರುತ್ತಾರೆ.
ಇವರು ಮಾಡಿದ ಮಸಲತ್ತಿಗೆ ಆಗ ತಾನೆ ಮೂಡಿಗೆರೆಗೆ ವಿಲೇಜ್ ಅಕೌಂಟೆಂಟ್ ಆಗಿ ಬಂದಿದ್ದ ನೇತ್ರಾವತಿ ಎಂಬುವವರನ್ನು ಭೂಮಿ ಶಾಖೆಯ ಕಂಪ್ಯೂಟರ್ ಆಗಿ ನೇಮಕ ಮಾಡಿ ಅವರಿಂದ ಅಕ್ರಮವಾಗಿ ಖಾತೆ ಮಾಡಿಸಿ ಇದೀಗ ನೇತ್ರಾವತಿ ಸಹ ಕಂಬಿ ಎಣಿಸುವಂತಹ ಸ್ಥಿತಿ ನಿರ್ಮಾಣ ಮಾಡಿದ್ದಾರೆ.
ಇದು ಕೇವಲ ಸ್ಯಾಂಪಲ್ ಅಷ್ಟೇ. ಇಂತಹ ನೂರಾರು ಜನರಿಗೆ ಮೂಡಿಗೆರೆ ತಾಲ್ಲೂಕಿನಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿ ಖಾತೆ ಮಾಡಿಕೊಡಲಾಗಿದೆ. ಎಕರೆಗೆ ಇಷ್ಟು ಎಂದು ಲಕ್ಷಾಂತರ ರುಪಾಯಿ ಹಣ ಪಡೆದು ಮನಸೋ ಇಚ್ಚೆ ಭೂಮಿ ಖಾತೆ ಮಾಡಿಕೊಡಲಾಗಿದೆ.
ಬಡವರು, ನಿಜವಾದ ಫಲಾನುಭವಿಗಳು ಭೂಮಿ ಮಂಜೂರಿ ಮಾಡಿಕೊಡಿ ಎಂದು ಅರ್ಜಿ ಹಾಕಿಕೊಂಡು ಗೋಗೆರದರು ಸ್ಪಂದಿಸದ ಅಧಿಕಾರಿಗಳು ಹಣ ನೀಡಿದವರಿಗೆ ಯಾವ ನಿಯಮಗಳನ್ನು ಪರಿಗಣಿಸದೇ ಭೂಮಿಯ ಹಕ್ಕುಪತ್ರ ನೀಡಿ ಖಾತೆ ಮಾಡಿಕೊಟ್ಟಿದ್ದಾರೆ.
ಈ ಸಂಬಂಧ ಈಗ ಗ್ರಾಮ ಲೆಕ್ಕಿಗರಾದ ಗಿರೀಶ್ ಮತ್ತು ನೇತ್ರಾವತಿ ಎಂಬುವವರನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದು, ತಹಸೀಲ್ದಾರ್ ಗ್ರೇಡ್ ಅಧಿಕಾರಿಗಳಾದ ರಮೇಶ್ ಮತ್ತು ಪಾಲಯ್ಯ ಅವರ ಬಂಧನಕ್ಕೆ ಕ್ರಮ ಜರುಗಿಸುತ್ತಿದ್ದಾರೆ.