ಮೂಡಿಗೆರೆ ಪಟ್ಟಣದ ಗೆಂಡೇಹಳ್ಳಿ ರಸ್ತೆಯ ಬದಿಯಲ್ಲಿ ಕಸದ ರಾಶಿಯಾಗಿ ಪಟ್ಣದ ಜನತೆಗೆ ರೋಗರುಜಿನ ಹರಡುತ್ತಿದ್ದ ಬಗ್ಗೆ ನಿನ್ನೆ ದರ್ಪಣ ವೆಬ್ ನ್ಯೂಸ್ ನಲ್ಲಿ ಪ್ರಕಟವಾಗಿದ್ದ ವರದಿ ಪರಿಣಾಮ ಬೀರಿದೆ.
ವರದಿಯ ಫಲಶೃತಿಯಾಗಿ ಮೂಡಿಗೆರೆ ಪಟ್ಟಣ ಪಂಚಾಯಿತಿ ನಿನ್ನೆ ರಾತ್ರಿಯಿಡೀ ಇಟಾಚಿ, ಟಿಪ್ಪರ್ ಬಳಸಿ ಕಸದ ರಾಶಿಯನ್ನು ಖಾಲಿ ಮಾಡಿದೆ.
ಕಸವನ್ನು ಎರಡು ದಿನದ ಒಳಗಾಗಿ ಖಾಲಿ ಮಾಡದಿದ್ದರೆ ತ್ಯಾಜ್ಯವನ್ನು ತಂದು ಪಟ್ಟಣ ಪಂಚಾಯಿತಿ ಕಛೇರಿ ಆವರಣದಲ್ಲಿ ಸುರಿಯುವುದಾಗಿ ಸಾರ್ವಜನಿಕರ ಎಚ್ಚರಿಕೆ ಎಂದು ನಿನ್ನೆ ದರ್ಪಣ ವೆಬ್ ನ್ಯೂಸ್ ನಲ್ಲಿ ಸುದ್ದಿ ಪ್ರಕಟಿಸಲಾಗಿತ್ತು.
ವರದಿಗೆ ಸ್ಪಂದಿಸಿದ ಉಪಸಭಾಪತಿ ಎಂ.ಕೆ. ಪ್ರಾಣೇಶ್
ಸುದ್ದಿಯನ್ನು ಗಮನಿಸಿದ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಜಿಲ್ಲಾಧಿಕಾರಿಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು. ಪರಿಣಾಮ ಎಚ್ಚೆತ್ತುಕೊಂಡ ಪಟ್ಟಣ ಪಂಚಾಯಿತಿ ಆಡಳಿತ ರಾತ್ರೋರಾತ್ರಿ ಕಾರ್ಯಾಚರಣೆಗಿಳಿದು ಕಸವನ್ನು ಖಾಲಿ ಮಾಡಿ ಸ್ವಚ್ಚಗೊಳಿಸಿದೆ.
ಮತ್ತೆ ಕಸ ಹಾಕದಂತೆ ಕ್ರಮ ವಹಿಸಬೇಕು :
ಇಲ್ಲಿ ಪಟ್ಟಣ ಪಂಚಾಯಿತಿ ಅಲ್ಲದೇ ಕೆಲವು ಖಾಸಗಿ ವ್ಯಕ್ತಿಗಳು, ಹೋಟೆಲ್, ಮೀನು ಮಾಂಸದ ಅಂಗಡಿಗಳವರು ಕಸವನ್ನು ತಂದು ಸುರಿಯುತ್ತಿದ್ದಾರೆ. ಇದನ್ನು ತಪ್ಪಿಸಲು ಆ ಜಾಗಕ್ಕೆ ಬಂದೋಬಸ್ತ್ ಮಾಡಿ ಯಾರೂ ಮತ್ತೆ ಕಸ ಎಸೆಯದಂತೆ ಕ್ರಮ ಜರುಗಿಸಬೇಕಾಗಿದೆ. ಇಲ್ಲದೇ ಹೋದರೆ ಮತ್ತೆ ಒಂದು ವಾರಕ್ಕೆ ಯಥಾ ಪ್ರಕಾರ ಕಸದ ರಾಶಿಯಾಗುತ್ತದೆ.