ವಿಜ್ಞಾನವನ್ನು ವೈಚಾರಿಕವಾಗಿ ನಮ್ಮ ನಿತ್ಯದ ಬದುಕಿಗೆ ಬಳಸಿಕೊಳ್ಳಲು ವಿಫಲರಾದರೆ ಅದು ವ್ಯಕ್ತಿಗತವಾದ ಸಮಗ್ರ ಬದುಕಿಗೆ ಮತ್ತು ಇಡೀ ಸಮಾಜಕ್ಕೆ ದೊಡ್ಡ ನಷ್ಟವಾಗುತ್ತದೆ ಎಂದು ಮೂಡಿಗೆರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತರಾಜ್ ಹೇಳಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಮೂಡಿಗೆರೆ ಸಮೀಪದ ಅಂಗಡಿ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ದಶಮಾನೋತ್ಸವ ಮತ್ತು ರಸಪ್ರಶ್ನೆ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳುವ ಬಗ್ಗೆ ವಿದ್ಯಾರ್ಥಿ ಯುವ ಜನರಿಗೆ ಶಿಕ್ಷಕ ಸಮೂಹ ಜಾಗೃತಿ ಮೂಡಿಸಬೇಕು, ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಮಾಡಬೇಕಾದ ಕೆಲಸವನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮಾಡುತ್ತಿರುವುದು ಶ್ಲಾಘನೀಯವಾಗಿದ್ದು, ಈ ನಿಟ್ಟಿನಲ್ಲಿ ಕೆಜೆವಿಎಸ್ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ವೈಜ್ಞಾನಿಕ ಯುಗದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಮನೋವಿಕಾಸ ಕುರಿತು ಶರಣ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಗಂಗಾಧರ ಶಿವಪುರ ಅವರು ಮಾತನಾಡಿ, ವಿಜ್ಞಾನದ ಸಂಶೋಧನೆಗಳ ಫಲಗಳು ಮನುಷ್ಯ ಮತ್ತು ಜೀವ ವೈವಿಧ್ಯತೆಯ ಸಾವಿಗೆ ಕಾರಣವಾಗದೆ, ಅವುಗಳು ಪರಿಸರದ ಬೆಳವಣಿಗೆಗೆ ಮತ್ತು ಮಕ್ಕಳ ಮನೋವಿಕಾಸದ ಅಭಿವೃದ್ಧಿಗೆ ಸಹಾಯಕವಾಗಬೇಕು, ವಿಜ್ಞಾನ ನಮ್ಮನ್ನು ಬಳಸಿಕೊಳ್ಳದೆ ನಾವು ವಿಜ್ಞಾನವನ್ನು ನಮ್ಮ ನಮ್ಮ ಆರೋಗ್ಯ ಮತ್ತು ನೆಮ್ಮದಿಯ ಬದುಕಿಗೆ ಹೆಚ್ಚು ಹೆಚ್ಚು ದುಡಿಸಿಕೊಳ್ಳಬೇಕು ಎಂದರು.
ಕೆಜೆವಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ. ಮಂಜುನಾಥಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿ, ಕೆಜೆವಿಎಸ್ ಸಂಘಟನೆಯು ಕೇವಲ ವಿಜ್ಞಾನದ ಸಂಗತಿಗಳಿಗೆ ಸೀಮಿತವಾಗದೆ, ಈ ನೆಲ ಜಲ ಪರಿಸರ, ಜೀವವಿದ್ಯತೆ ಹಾಗೂ ಮಾನವೀಯ ಮೌಲ್ಯದಂತ ಹತ್ತು ಹಲವು ಸಂಗತಿಗಳಿಗೆ, ಹಲವು ವಿಚಾರಗಳೊಂದಿಗೆ ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ರಾಜದಾದ್ಯಂತ ಈ ನೆಲದ ಜನರ ಒಂದು ನಾಡಿಮಿಡಿತದೊಂದಿಗೆ ಧ್ವನಿಯಾಗುತ್ತಲೇ ಬರುತ್ತಿದೆ, ಬಹು ಮುಖ್ಯವಾಗಿ ವಿದ್ಯಾರ್ಥಿ ಯುವಜನರಲ್ಲಿ ಹೊಸ ಚಿಂತನೆಯನ್ನು ಬಿಚ್ಚಿ ಬೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಸಮಿತಿಯ ಚಟುವಟಿಕೆಗಳನ್ನು ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಜಿಲ್ಲಾಧ್ಯಕ್ಷ ಮುಗಳಿಕಟ್ಟೆ ಲೋಕೇಶ್ ಅವರು ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ, ನೀರು ಮತ್ತು ನೈರ್ಮಲ್ಯ ಕುರಿತು ಹಮ್ಮಿಕೊಂಡಿದ್ದ ರಸಪ್ರಶ್ನೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳು, ಮತ್ತು ಕೆಜೆವಿಎಸ್ ಕೊಡಮಾಡುವ ಅನಿತಾ ಕೌಲ್ ಹಾಗೂ ಸಾವಿತ್ರಿಬಾಯಿ ಪುಲೆ ರಾಜ್ಯಪ್ರಶಸ್ತಿ ಪಡೆದ ಪುರಸ್ಕೃತರು ಹಾಗೂ ಮೂಡಿಗೆರೆ ಕ್ಷೇತ್ರಶಿಕ್ಷಣಾಧಿಕಾರಿ ಹೇಮಂತ್ ರಾಜ್ ಅವರನ್ನು ಮತ್ತು ಹಿರಿಯ ನಿವೃತ್ತ ಶಿಕ್ಷಕರನ್ನು ದಶಮಾನೋತ್ಸವದ ಪ್ರಯುಕ್ತ ಸನ್ಮಾನಿಸಲಾಯಿತು.
ಮೂಡಿಗೆರೆ ತಾಲೂಕು ಕಸಾಪ ಅಧ್ಯಕ್ಷ ಶಾಂತಕುಮಾರ್, ಕೆಜೆವಿಎಸ್ ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಪ್ರಕಾಶ್, ಅಂಗಡಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ. ಇ. ರಾಮೇಶ್ವರಪ್ಪ, ಜಾನಪದ ಗಾಯಕ ಬಕ್ಕಿ ಮಂಜುನಾಥ್, ಎಸ್ ಡಿ ಎಂ ಸಿ ಅಧ್ಯಕ್ಷ ಸತೀಶ್, ಶರಣೆ ಸಿದ್ದಮ್ಮ, ನಿವೃತ್ತ ಶಿಕ್ಷಕಿ ನಾಗರತ್ನ, ಸೀತಮ್ಮ ಹಾಲೇಗೌಡ , ಶಿಕ್ಷಕಿ ಲತಾ, ಮಂಜಪ್ಪ ದೊಡ್ಮನಿ ಇದ್ದರು.