ಕೃಷಿಕ ಪತ್ರಿಕೆ ರೂಪಿಸಿರುವ ಇ-ಕೃಷಿಕ ಅಗ್ರಿಕಲ್ಚರ್ ಆ್ಯಪ್ ಗೆ ಕೇಂದ್ರ ಸರ್ಕಾರದಿಂದ ಮನ್ನಣೆ ದೊರೆತ್ತಿದ್ದು, ಸ್ಟಾರ್ಟ್ ಅಪ್ ಗಳಿಗೆ ನೀಡುವ ಸಹಾಯಧನಕ್ಕೆ ಆಯ್ಕೆಯಾಗಿದೆ.
ಕೇಂದ್ರಸರ್ಕಾರವು ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಸಾರ್ವಜನಿಕರಿಗೆ ಅನುಕೂಲ ಆಗುವಂತ ಸ್ಟಾರ್ಟ್ ಅಪ್ ಗಳನ್ನುಗುರುತಿಸಿ ಅವುಗಳಿಗೆ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ.
ಇಂತಹ ಸಹಾಯಧನ ಪಡೆಯಲು ನಮ್ಮ ಚಿಕ್ಕಮಗಳೂರು ಜಿಲ್ಲೆಯ ಸ್ಟಾರ್ಟ್ ಅಪ್ ಒಂದು ಆಯ್ಕೆ ಆಗಿದೆ.
ಮೂಡಿಗೆರೆ ತಾಲ್ಲೂಕಿನ ದೇವರುಂದ ಗ್ರಾಮದಲ್ಲಿ ಪ್ರಾರಂಭಿಸಲಾಗಿರುವ ಇ-ಕೃಷಿಕ ಆ್ಯಪ್ ಇಂತಹ ಮನ್ನಣೆಗೆ ಪಾತ್ರವಾಗಿರುವಂತಹುದು.
ಎಂ.ಜೆ. ದಿನೇಶ್ ದೇವರುಂದ ಇವರು ಕೃಷಿ ಮತ್ತು ಗ್ರಾಮೀಣ ವಿಷಯಗಳಿಗೆ ಸಂಬಂಧಿಸಿದ ಕೃಷಿಕ ಪತ್ರಿಕೆ ಯನ್ನು ಪ್ರಾರಂಭಿಸಿ ವಿಶೇಷವಾಗಿ ಕಾಫಿ ಬೆಳೆಯುವ ಪ್ರದೇಶಗಳ ಕೃಷಿ ಚಟುವಟಿಕೆಗಳ ಮಾಹಿತಿ ಒದಗಿಸುತ್ತಿದ್ದಾರೆ.
ಕೃಷಿಕ ಪತ್ರಿಕೆ ವತಿಯಿಂದ ಇ-ಕೃಷಿಕ ಹೆಸರಿನ ಅಗ್ರಿ ಆನ್ ಲೈನ್ ಆ್ಯಪ್ ಒಂದನ್ನು ರೂಪಿಸಿ ಆ ಮೂಲಕ ಕೃಷಿಗೆ ಸಂಬಂಧಿಸಿದ ಉಚಿತ ಮಾಹಿತಿಗಳನ್ನು ನೀಡುತ್ತಿದ್ದು ಜೊತೆಗೆ ಕೃಷಿ ಸಂಬಂಧಿತ ಪರಿಕರ, ಉತ್ಪನ್ನಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ತುಂಬಾ ಅನುಕೂಲವಾಗಿದ್ದು, ರೈತರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.
ಇದೀಗ ಕೇಂದ್ರ ಸರ್ಕಾರದ ಸಹಾಯಧನ ಯೋಜನೆಗೆ ಈ ಆ್ಯಪ್ ಆಯ್ಕೆಯಾಗಿ ಇತ್ತೀಚೆಗೆ ಸಹಾಯಧನವನ್ನು ಸ್ವೀಕರಿಸಿದೆ. 2021-22 ನೇ ಸಾಲಿನಲ್ಲಿ ದೇಶದ 8 ಸ್ಟಾರ್ಟ್ ಅಪ್ ಗಳು ಸಹಾಯಧನ ಯೋಜನೆಗೆ ಆಯ್ಕೆಯಾಗಿದ್ದು ಅವುಗಳಲ್ಲಿ ಇ-ಕೃಷಿಕ ಕೂಡ ಒಂದಾಗಿದೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇ-ಕೃಷಿಕ ರುವಾರಿಗಳಾದ ದಿನೇಶ್ ದೇವರುಂದ ಸಹಾಯಧನವನ್ನು ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ದೇವರುಂದ ; ನಮ್ಮ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಗುರುತಿಸಿ ಮನ್ನಣೆ ನೀಡಿರುವುದು ಸಂತಸ ತಂದಿದೆ. ಇ-ಕೃಷಿಕ ಇದು ರೈತರಿಗಾಗಿಯೇ ರೂಪಿಸಿರುವ ಆ್ಯಪ್ ಆಗಿದೆ. ಇದನ್ನು ಎಲ್ಲಾ ರೈತರು ತಮ್ಮ ಮೊಬೈಲ್ ಗಳಲ್ಲಿ ಡೌನ್ ಲೋಡ್ ಮಾಡಿಕೊಂಡು ಕೃಷಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿ ಪಡೆಯಬಹುದು. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಹೆಚ್ಚಿನ ಸೇವೆ ಒದಗಿಸಲಾಗುವುದು ಎಂದಿದ್ದಾರೆ.