ಮೂಡಿಗೆರೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಸರ್ವಸದಸ್ಯರ ಸಭೆ ಶನಿವಾರ ಪಟ್ಟಣದ ರೈತ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾಹಿತಿ ನೀಡಿದ ಬ್ಯಾಂಕ್ ನ ಅಧ್ಯಕ್ಷ ಹಳಸೆ ಶಿವಣ್ಣ ; ಬ್ಯಾಂಕ್ 1935ರಲ್ಲಿ ಪ್ರಾರಂಭವಾಗಿ 140 ಹಳ್ಳಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕ್ 2022-23ನೇ ಸಾಲಿನಲ್ಲಿ 60,07,981 ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 25 ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಬ್ಯಾಂಕ್ ಒಟ್ಟು 102.19 ಲಕ್ಷ ಸದಸ್ಯರ ಷೇರು ಬಂಡವಾಳ ಹೊಂದಿದೆ. ಬ್ಯಾಂಕಿನ ಷೇರು ಬಂಡವಾಳ ಮತ್ತು ಇತರೆ ನಿಧಿಗಳನ್ನು ರಾಜ್ಯ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದು ಇದು ಮಾರ್ಚ್ ಅಂತ್ಯಕ್ಕೆ 889.38 ಲಕ್ಷ ರೂ. ಆಗಿದೆ. ರಾಜ್ಯ ಬ್ಯಾಂಕಿನಿಂದ ವಿವಿಧ ಯೋಜನೆಗಳಿಗೆ ಸಾಲವನ್ನು ಪಡೆದಿದ್ದು ಮಾರ್ಚ್ ಕೊನೆಯ ಹೊತ್ತಿಗೆ ಸಾಲದ ಮೊತ್ತ 766.22 ಲಕ್ಷ ರೂಗಳಾಗಿರುತ್ತದೆ. ರಾಜ್ಯ ಬ್ಯಾಂಕಿಗೆ ಪಾವತಿಸಬೇಕಾದ ತಗಾದೆ ಸಾಲವನ್ನು ಸಂಪೂರ್ಣ ಪಾವತಿ ಮಾಡಲಾಗಿದೆ.
2022-23 ನೇ ಸಾಲಿನಲ್ಲಿ ಸದಸ್ಯರಿಂದ ಶೇಕಡಾ 62.09 ಸಾಲ ವಸೂಲಾತಿಯಾಗಿದೆ. ರಾಜ್ಯದಾದ್ಯಂತ ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಬೆಳೆನಷ್ಟವಾಗಿರುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಸಾಲ ವಸೂಲಾತಿ ಮಾಡಲಾಗಿದೆ.
ಬ್ಯಾಂಕಿನ ಪ್ರಗತಿಯಲ್ಲಿ ಸಿಬ್ಬಂದಿವರ್ಗದವರು ಪರಿಶ್ರಮದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿವರ್ಗ ಮತ್ತು ಸದಸ್ಯರ ಸಹಕಾರದಿಂದ ಬ್ಯಾಂಕ್ ಉತ್ತಮ ಸಾಧನೆ ತೋರುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಬ್ಯಾಂಕ್ ಇನ್ನೂ ಹೆಚ್ಚಿನ ಸೇವೆ ನೀಡಲು ಸಾಧ್ಯವಾಗುತ್ತದೆ. ಜೊತೆಗೆ ಸರ್ಕಾರದ ಬಡ್ಡಿ ರಿಯಾಯಿತಿ ಪಡೆಯಬಹುದಾಗಿದೆ ಎಂದರು.
ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಓ.ಜಿ. ರವಿ, ನಿರ್ದೇಶಕರಾದ ಜಿ.ಕೆ. ದಿವಾಕರ್, ಶ್ರೀಮತಿ ಮಮತಾ ಸತೀಶ್, ಅಶ್ವಥ್ ಎಂ.ಬಿ., ಭರತ್ ಕುಮಾರ್ ಹೆಚ್.ಕೆ., ವಿಕ್ರಂ ಬಿ.ಎಸ್., ಗಣಪತಿ ಆಚಾರ್, ಸತೀಶ್ ಕೆ.ಟಿ., ಜಿನರಾಜ ಹೆಗ್ಗಡೆ, ರಾಜ್ಯಬ್ಯಾಂಕ್ ಪ್ರತಿನಿಧಿ ಪುಟ್ಟರಾಜು ಹೆಚ್.ಎಸ್. ಉಪಸ್ಥಿತರಿದ್ದರು.
ಬ್ಯಾಂಕಿನ ವ್ಯವಸ್ಥಾಪಕರಾದ ಕಾರ್ತಿಕ್ ಸಿ.ಎಂ. ಅವರ ಸಂಘದ ವಾರ್ಷಿಕ ವರದಿಯನ್ನು ಸಭೆಗೆ ಮಂಡಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆದ 14 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರೋತ್ಸಾಹ ಧನ ವಿತರಿಸಲಾಯಿತು.