ಸರ್ಕಾರಿ ವೈದ್ಯರೊಬ್ಬರು ನದಿಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ನದಿಯಲ್ಲಿ ವರದಿಯಾಗಿದೆ.
ಹೊಳೆನರಸೀಪುರ ತಾಲೂಕಿನ ಕೆರಗೋಡು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ಸಿ)ದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ (31) ಮೃತಪಟ್ಟ ವೈದ್ಯ ಎಂದು ಗುರುತಿಸಲಾಗಿದೆ.
ಮೃತ ಚಂದ್ರಶೇಖರ್ ಶುಕ್ರವಾರ ಕರ್ತವ್ಯಕ್ಕೂ ಮುನ್ನ ಹೇಮಾವತಿ ನದಿ ಹಿನ್ನೀರಿನ ಖೋನಾಪುರ ಐಲ್ಯಾಂಡ್ನಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ತೆರಳಿದ್ದರೆನ್ನಲಾಗಿದ್ದು, ಪೂಜೆಗೂ ಮುನ್ನ ಹೇಮಾವತಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಹೇಮಾವತಿ ನದಿ ನೀರು ಸಂಪೂರ್ಣ ಕಡಿಮೆಯಾಗಿದೆ ಎಂದು ಆಳ ಅರಿಯದೆ ಇಳಿದ ಚಂದ್ರಶೇಖರ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಆದರೆ ಸಾವಿನ ಬಗ್ಗೆ ಅನುಮಾನಗಳು ಹುಟ್ಟಿದ್ದು, ಇದು ಆಕಸ್ಮಿಕ ಸಾವೇ, ಆತ್ಮಹತ್ಯೆಯೇ ಆಥವಾ ಕೊಲೆಯೇ ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕು
ರಾತ್ರಿಯವರೆಗೂ ಮಗ ಮನೆಗೆ ಬಾರದೆ ಇದ್ದಾಗ ಪೋಷಕರು ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸದೇ ಇದ್ದಾಗ ಅರಕಲಗೂಡು ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.
ಒಂದೇ ಸ್ಥಳದಲ್ಲಿ ಕಾರು ನಿಂತಿದ್ದನ್ನು ಗಮನಿಸಿದ್ದ ಕರ್ತವ್ಯದಲ್ಲಿದ್ದ ಗೊರೂರು ಪೊಲೀಸರು ಅರಕಲಗೂಡು ಪೊಲೀಸರ ಸೂಚನೆ ಮೇರೆಗೆ ನದಿಯಲ್ಲಿ ಹುಡಕಾಟ ನಡೆಸಿದ್ದಾರೆ.
ನದಿದಂಡೆಯಿಂದ ಸ್ವಲ್ಪ ದೂರದಲ್ಲಿ ಚಂದ್ರಶೇಖರ್ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ.
ಘಟನೆ ಸಂಬಂಧ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.