ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಚಕ್ಕೋಡು ಗ್ರಾಮದ ಕಾಫಿ ತೋಟದಲ್ಲಿ ಸಂಚರಿಸುತ್ತಿದ್ದ ಕಾಳಿಂಗ ಸರ್ಪವೊಂದನ್ನು ಸೆರೆಹಿಡಿಯಲಾಗಿದೆ.
ಅರಣ್ಯ ಇಲಾಖೆ ಉಸ್ತುವಾರಿಯಲ್ಲಿ ಸ್ನೇಕ್ ಆರೀಫ್ ಅವರು ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಚಕ್ಕೋಡು ಗ್ರಾಮದ ಜಗದೀಶ್ ಗೌಡ ಎಂಬವರ ಕಾಫಿ ತೋಟದಲ್ಲಿ ಕಳೆದ ಎರಡು ದಿನಗಳಿಂದ ಕಾಳಿಂಗ ಸರ್ಪ ತೋಟದ ಕಾರ್ಮಿಕರಿಗೆ ಕಾಣಿಸಿಕೊಂಡಿತು. ಈಗ ಕಾಫಿ ತೋಟದಲ್ಲಿ ತೋಟದ ಕೆಲಸಗಳು ನಡೆಯುತ್ತಿರುವುದರಿಂದ ಕಾರ್ಮಿಕರು ತೋಟದ ಕೆಲಸಗಳಲ್ಲಿ ನಿರತರಾಗಿದ್ದಾಗ ಕಾಳಿಂಗ ಸರ್ಪ ಕಂಡು ಭಯಬೀತರಾದರು. ಕೂಡಲೇ ಮಾಲೀಕ ಜಗದೀಶ್ ಗೌಡರ ಗಮನಕ್ಕೆ ತಂದರು.
ತೋಟದ ಮಾಲೀಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ನಂತರ ಬಣಕಲ್ ಉರಗ ಪ್ರೇಮಿ ಕೆ.ಎಚ್.ಮೊಹಮ್ಮದ್ ಆರೀಫ್ ಅವರನ್ನು ಕರೆಸಿ ಸುಮಾರು 14 ಅಡಿ ಉದ್ದದ ಬೃಹತ್ತಾದ ಕಾಳಿಂಗ ಸರ್ಪ ಸೆರೆ ಹಿಡಿದು ಚಾರ್ಮಾಡಿ ಸುರಕ್ಷಿತ ಅರಣ್ಯಕ್ಕೆ ಬಿಟ್ಟರು.
ಗಸ್ತು ಅರಣ್ಯ ಅಧಿಕಾರಿಗಳಾದ ಮೊಹಸ್ಸಿನ್, ಜಯಪ್ಪ, ಪೊಲೀಸ್ ಸಿಬ್ಬಂದಿಗಳು ಹಾಗೂ ಸ್ಥಳೀಯರು ಇದ್ದರು.