ಇನ್ನು ಮುಂದೆ ನಮ್ಮ ರಾಜ್ಯದ ರಸ್ತೆಗಳನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರೇ ಐದು ವರ್ಷದವರೆಗೆ ನಿರ್ವಹಣೆ ಮಾಡಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತರುತ್ತಿದ್ದೇವೆʼ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಇಲ್ಲಿಯವರೆಗೆ ಈ ನಿಯಮ ಇರಲಿಲ್ಲ. ಹೊಸದಾಗಿ ಜಾರಿ ಮಾಡುತ್ತಾ ಇದ್ದೇವೆ. ಗುತ್ತಿಗೆದಾರರಿಗೆ ಆ ಹೊಣೆ ನೀಡಲಾಗುವುದು. ಇನ್ನು ಟೆಂಡರ್ ಆಹ್ವಾನಿಸುವುದಿಲ್ಲ’ ಎಂದರು. ಇದರಿಂದ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಲು ಪರೋಕ್ಷವಾಗಿ ಈ ನಿಯಮ ಪ್ರೇರಣೆಯಾಗುತ್ತದೆ. ಗುತ್ತಿಗೆದಾರರ ಹೊಣೆಗಾರಿಕೆಯನ್ನು ಹೆಚ್ಚಿಸಲಿದೆ ಎಂದರು.
ಇದಲ್ಲದೇ, ಲೋಕೋಪಯೋಗಿ ಇಲಾಖೆಯಲ್ಲಿ ಸುಧಾರಣೆ ತರಲು ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ.ಈ ನಿಟ್ಟಿನಲ್ಲಿಯೇ ನಿರ್ವಹಣೆಯ ಜವಾಬ್ದಾರಿಯನ್ನು ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರಿಗೇ ನೀಡಲಾಗುವುದು. ಇನ್ನು ಇಲಾಖೆಯಲ್ಲಿ ಆ್ಯಪ್ ಸಿದ್ಧಪಡಿಸುತ್ತಿದ್ದು, ಅದು ಪ್ರಾಥಮಿಕ ಹಂತದಲ್ಲಿದೆ.ಇದು ಅನುಷ್ಠಾನಕ್ಕೆ ಬಂದರೆ ಹೆಚ್ಚು ಅನುಕೂಲ ಆಗಲಿದೆʼʼ ಎಂದು ಅವರು ಮಾಹಿತಿ ನೀಡಿದರು.