ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಉದ್ಯಮಿಯೊಬ್ಬರಿಗೆ ಬಿ.ಜೆ.ಪಿ. ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ ಐದು ಕೋಟಿ ಹಣವಸೂಲಿ ಮಾಡಿದ್ದ ಪ್ರಖರ ವಾಗ್ಮಿ, ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ನಿನ್ನೆ ತಡರಾತ್ರಿ ಉಡುಪಿಯಲ್ಲಿ ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಚಿಕ್ಕಮಗಳೂರು ಬಿ.ಜೆ.ಪಿ. ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು ಎಂಬಾತನು ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಆತನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಬೈಂದೂರು ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವವರು ಬೆಂಗಳೂರಿನ ಬಂಡೆಪಾಳ್ಯ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಚೈತ್ರಾ ಕುಂದಾಪುರ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಚೈತ್ರಾ ಕುಂದಾಪುರ ತನಗೆ ಕೇಂದ್ರದ ಬಿ.ಜೆ.ಪಿ. ಮತ್ತು ಆರ್.ಎಸ್.ಎಸ್. ನಾಯಕರ ಸಂಪರ್ಕವಿದೆ ಎಂದು ಹೇಳಿಕೊಂಡು ಬೈಂದೂರು ಕ್ಷೇತ್ರದಿಂದ ಬಿ.ಜೆ.ಪಿ. ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ಹಣವನ್ನು ಪಡೆದು ವಂಚಿಸಿದ್ದಾರೆ. ಆರ್.ಎಸ್.ಎಸ್. ನಾಯಕ ಎಂದು ಹೇಳಿಕೊಂಡು ಒಬ್ಬ ವ್ಯಕ್ತಿಯನ್ನು ಕರೆತಂದಿದ್ದರು. ಒಂದು ತಂಡವಾಗಿ ನನ್ನನ್ನು ನಂಬಿಸಿ ನನ್ನಿಂದ ಒಮ್ಮೆ ಮೂರೂವರೆ ಕೋಟಿ, ನಂತರ ಒಂದೂವರೆ ಕೋಟಿ ಹಣಪಡೆದು ವಂಚಿಸಿದ್ದಾರೆ ಎಂದು ಉದ್ಯಮಿ ತಾನು ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನ ವಿವರ :
ಬೈಂದೂರು ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ ವರಲಕ್ಷ್ಮೀ ಚಾರಿಟಲ್ ಟ್ರಸ್ಟ್ ಹೆಸರಿನಲ್ಲಿ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿದ್ದರು. ಅವರ ಸೇವೆಯನ್ನು ಕಂಡು ಕೆಲವು ಅವರಿಗೆ ಬೈಂದೂರು ಕ್ಷೇತ್ರದಿಂದ ಬಿ.ಜೆ.ಪಿ. ಅಭ್ಯರ್ಥಿಯಾಗಿ ಟಿಕೆಟ್ ಕೇಳುವಂತೆ ಸಲಹೆ ನೀಡಿದ್ದಾರೆ. ಆಗ ಪರಿಚಯವಾದ ಪ್ರಸಾದ್ ಬೈಂದೂರು ಎಂಬ ಬಿಜೆಪಿ ಮುಖಂಡ ಚೈತ್ರಾ ಕುಂದಾಪುರ ಮೂಲಕ ಟಿಕೆಟ್ ಗೆ ಪ್ರಯತ್ನಿಸುವಂತೆ ಸಲಹೆ ನೀಡಿ ಅವಳನ್ನು ಪರಿಚಯಿಸಿದ್ದಾರೆ.
ಚೈತ್ರಾ ಕುಂದಾಪುರ ನಾನು ಹಿಂದೂ ಸಂಘಟನೆಯಲ್ಲಿ ಇರುವುದರಿಂದ ನನಗೆ ಕೇಂದ್ರದ ಬಿ.ಜೆ.ಪಿ. ಮತ್ತು ಆರ್.ಎಸ್.ಎಸ್. ನಾಯಕರ ಪರಿಚಯವಿದೆ. ಸುಪ್ರೀಂ ಕೋರ್ಟ್ ಜಡ್ಜ್ ಗಳ ಪರಿಚಯವಿದೆ ನಿಮಗೆ ಟಿಕೆಟ್ ಕೊಡಿಸುತ್ತೇನೆ ಎಂದು ನಂಬಿಸಿ ನಾಟಕ ಶುರುಮಾಡಿದ್ದಾಳೆ.
ಚಿಕ್ಕಮಗಳೂರು ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು ಅವರನ್ನು ಸಂಪರ್ಕಿಸಿ ಉದ್ಯಮಿಯಿಂದ ಹಣಕೀಳುವ ಸಂಚು ರೂಪಿಸಿದ್ದಾಳೆ.
ಇದರ ಭಾಗವಾಗಿ ಗಗನ್ ಕಡೂರು ಅವರಿಗೆ ಕೇಂದ್ರ ನಾಯಕರ ಪರಿಚಯವಿದೆ ಅವರ ಮೂಲಕ ಟಿಕೆಟ್ ಗೆ ಪ್ರಯತ್ನಿಸೋಣ ಎಂದು ಉದ್ಯಮಿಯನ್ನು ಚಿಕ್ಕಮಗಳೂರಿಗೆ ಕರೆತಂದಿದ್ದಾರೆ. ಚಿಕ್ಕಮಗಳೂರು ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಗಗನ್ ಕಡೂರು ಅವರನ್ನು ಪರಿಚಯಿಸಿದ್ದಾಳೆ. ಆಗ ಗಗನ್ ಕಡೂರು ನನಗೆ ಪ್ರಧಾನಿ ಹಾಗೂ ಕೇಂದ್ರ ನಾಯಕರ ಕಛೇರಿಯಲ್ಲಿ ನಿಕಟ ಸಂಪರ್ಕವಿದೆ ನಿಮಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿದ್ದಾನೆ. ಅಲ್ಲದೇ ಟಿಕೆಟ್ ಸಿಗಬೇಕು ಎಂದರೆ ಆರ್.ಎಸ್.ಎಸ್. ನಾಯಕರ ಶಿಪಾರಸ್ಸು ಬೇಕು. ಅದಕ್ಕಾಗಿ ಸುಮಾರು 45 ವರ್ಷಗಳಿಂದ ಉತ್ತರ ಭಾರತದಲ್ಲಿ ಆರ್.ಎಸ್.ಎಸ್. ನಾಯಕರಾಗಿರುವ ಚಿಕ್ಕಮಗಳೂರಿನ ವಿಶ್ವನಾಥ್ ಜಿ ಎಂಬುವವರಿಂದ ಶಿಪಾರಸ್ಸು ಮಾಡಿಸುವುದಾಗಿ ಹೇಳಿದ್ದಾನೆ.
ವಿಶ್ವನಾಥ್ ಜಿ. ಸದ್ಯ ಚಿಕ್ಕಮಗಳೂರಿನಲ್ಲೇ ಇದ್ದಾರೆ ಅರನ್ನು ಭೇಟಿ ಮಾಡಿಸುತ್ತೆನೆ ಎಂದು ಹೇಳಿ ಮೊದಲೇ ತಯಾರಿ ಮಾಡಿದ್ದ ವ್ಯಕ್ತಿಯೊಬ್ಬರನ್ನು ವಿಶ್ವನಾಥ್ ಜಿ ಎಂದು ಪರಿಚಯಿಸುತ್ತಾರೆ. ಅಲ್ಲಿ ವಿಶ್ವನಾಥ್ ಎಂದು ಹೇಳಿದ್ದ ವ್ಯಕ್ತಿ ನಾನು ಬಿ.ಜೆ.ಪಿ. ಕೇಂದ್ರ ಆಯ್ಕೆ ಸಮಿತಿ ಸದಸ್ಯನಾಗಿದ್ದ, ಆರ್.ಎಸ್.ಎಸ್. ಮತ್ತು ಬಿ.ಜೆ.ಪಿ. ನಡುವೆ ಕೇಂದ್ರ ಸಮನ್ವಯಕಾರನಾಗಿದ್ದೇನೆ. ಟಿಕೆಟ್ ವಿಚಾರದಲ್ಲಿ ನನ್ನ ನಿರ್ಧಾರವೇ ಅಂತಿಮ. ಆದರೆ ಟಿಕೆಟ್ ನೀಡಲು ಹಣ ನೀಡಬೇಕಾಗುತ್ತದೆ ಎಂದಿದ್ದಾನೆ. ಮೊದಲು 50 ಲಕ್ಷ ಗಗನ್ ಕಡೂರು ಬಳಿ ನೀಡಬೇಕು, ನಂತರ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದಂತೆ 3 ಕೋಟಿ ಕೊಡಬೇಕು ಎಂದು ಹೇಳಿದ್ದಾರೆ.
ಮೊದಲ ಕಂತು 50 ಲಕ್ಷವನ್ನು ಗಗನ್ ಕಡೂರು ಬಳಿ ಶಿವಮೊಗ್ಗದ ಆರ್.ಎಸ್.ಎಸ್. ಕಛೇರಿ ಎದುರೇ ನೀಡಿರುತ್ತಾರೆ. ನಂತರ ವಿಶ್ವನಾಥ್ ಜಿ ಜೊತೆ ಕಾನ್ಪರೆನ್ಸ್ ಕಾಲ್ ಮಾಡಿ ಮಾತನಾಡಿಸಿ ಟಿಕೆಟ್ ವಿಚಾರದಲ್ಲಿ ನೀವು ಹೊಸಪೇಟೆಯ ಸಂಸ್ಥಾನ ಮಠ ಹಿರೆಹಡಗಲಿ ಅಭಿನವ ಹಾಲಶ್ರೀ ಶಿಪಾರಸ್ಸು ಮುಖ್ಯವಾಗಿದೆ ಎಂದು ಹೇಳಿ ಅಲ್ಲಿಗೆ ಉದ್ಯಮಿಯನ್ನು ಕಳುಹಿಸಿದ್ದಾರೆ. ಅಲ್ಲಿ ಸ್ವಾಮೀ ನಿಮಗೆ ಟಿಕೆಟ್ ಕನ್ಪರ್ಮ್ ಆಗುತ್ತೆ ಎಂದು ಹೇಳಿ ಒಂದೂವರೆ ಕೋಟಿ ಹಣ ನೀಡುವಂತ ಸೂಚಿಸಿದ್ದಾರೆ. ಅದರಂತೆ ಜನವರಿ 16ರಂದು ಬೆಂಗಳೂರಿನಲ್ಲಿ ಸ್ವಾಮೀಜಿ ಮನೆಗೆ ತೆರಳಿ ಒಂದೂವರೆ ಕೋಟಿ ಕೊಟ್ಟಿದ್ದಾರೆ. ಒಂದುವೇಳೆ ಟಿಕೆಟ್ ಸಿಗದಿದ್ದರೆ ಹಣ ವಾಪಾಸ್ಸು ನೀಡಲು ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿ ಸ್ವಾಮೀಜಿ ಖುದ್ದು ಹಣ ಸ್ವೀಕರಿಸಿದ್ದಾರೆ.
ನಂತರ ಕೆಲ ದಿನಗಳ ನಂತರ ಉದ್ಯಮಿಗೆ ಕಾನ್ಪರೆನ್ಸ್ ಕಾಲ್ ಮಾಡಿ ಕೇಂದ್ರ ಬಿ.ಜೆ.ಪಿ. ಚುನಾವಣಾ ಸಮಿತಿ ಸದಸ್ಯರು ಬೆಂಗಳೂರಿಗೆ ಬಂದಿದ್ದಾರೆ ಅವರನ್ನು ನೀವು ಭೇಟಿಯಾಗಬೇಕು ಎಂದು ಹೇಳಿ ಕುಮಾರಕೃಪ ಅತಿಥಿ ಗೃಹಕ್ಕೆ ಉದ್ಯಮಿಯನ್ನು ಕರೆಸಿಕೊಂಡು ಅಲ್ಲಿ ನಾಯ್ಕ್ ಎಂಬ ವ್ಯಕ್ತಿಯನ್ನು ಗಗನ್ ಕಡೂರು ಪರಿಚಯಿಸಿದ್ದಾನೆ. ಅವರು ನಿಮಗೆ ಬೈಂದೂರು ಟಿಕೆಟ್ ಕನ್ಪರ್ಮ್ ಮಾಡಲು ಮೂರು ಕೋಟಿ ಗಗನ್ ಕಡೂರು ಬಳಿ ಕೊಡಬೇಕು ಎಂದು ಹೇಳಿದ್ದಾರೆ. ಮೂರು ಕೋಟಿ ಹಣವನ್ನು ಮಂಗಳೂರಿನಲ್ಲಿ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಸೂಚಿಸಿದ ವ್ಯಕ್ತಿಗಳಿಗೆ ನೀಡಿದ್ದಾರೆ. ಇದಾದ ನಂತರ ಮಾರ್ಚ್ 8 ರಂದು ಗಗನ್ ಕಡೂರು ಉದ್ಯಮಿಗೆ ಕರೆ ಮಾಡಿ ವಿಶ್ವನಾಥ್ ಜಿ ಅವರನ್ನು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳುತ್ತಾನೆ. ಮರುದಿನ ಕರೆಮಾಡಿ ವಿಶ್ವನಾಥ್ ಜಿ ನಿಧನ ಹೊಂದಿದರು ಎಂದು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಉದ್ಯಮಿ ತನಗೆ ಪರಿಚಯವಿರುವ ಕಾಶ್ಮೀರದಲ್ಲಿರುವ ನಿವೃತ್ತ ಸೇನಾ ಅಧಿಕಾರಿಯ ಮೂಲಕ ವಿಚಾರಿಸಲಾಗಿ ವಿಶ್ವನಾಥ್ ಜಿ. ಎನ್ನುವ ವ್ಯಕ್ತಿ ಆರ್.ಎಸ್.ಎಸ್. ನಲ್ಲಿ ಯಾರೂ ಇಲ್ಲ ಎಂದು ಹೇಳಿದ್ದಾರೆ.
ಇದರಿಂದ ಅನುಮಾನಗೊಂಡ ಉದ್ಯಮಿ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಇವರುಗಳನ್ನು ತನ್ನ ಕಛೇರಿಗೆ ಕರೆಸಿಕೊಂಡು ವಿಚಾರಿಸಿದಾಗ ನೀವು ನೀಡಿದ ಮೂರೂವರೆ ಕೋಟಿ ಹಣವೆಲ್ಲ ವಿಶ್ವನಾಥ್ ಜಿ ಬಳಿ ಕೊಟ್ಟಿದ್ದೆವು ಈಗ ಅವರು ನಿಧನ ಹೊಂದಿದ್ಧಾರೆ ಎಂದು ಹೇಳಿದ್ದಾರೆ. ಆಗ ಉದ್ಯಮಿ ನೀವು ನಾಟಕವಾಡುತ್ತಿದ್ದೀರಿ ಹಣ ವಾಪಾಸ್ಸು ಕೊಡುತ್ತೀರ ಇಲ್ಲ ಪೊಲೀಸ್ ಮೊರೆ ಹೋಗಬೇಕಾ ಎಂದು ಒತ್ತಡ ಹಾಕಿದಾಗ ವಿಷದ ಬಾಟಲಿ ತೋರಿಸಿ ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಬ್ಲಾಕ್ ಮೇಲ್ ಮಾಡಿದ್ದಾರೆ. ಸ್ವಲ್ಪ ಕಾಲಾವಕಾಶ ಕೊಡಿ ಹಣ ಹಿಂದಿರುಗಿಸುತ್ತೇವೆ ಎಂದು ಹೇಳಿ ಹೋಗಿದ್ದಾರೆ. ನಂತರ ಪೋನ್ ಕರೆ ಸ್ವೀಕರಿಸದೇ ತಪ್ಪಿಸಿಕೊಂಡು ತಿರುಗಿದ್ದಾರೆ. ಇತ್ತ ಹಾಲಶ್ರೀ ಸ್ವಾಮೀಜಿಯನ್ನು ವಿಚಾರಿಸಿದರೆ ನನಗೆ ವಿಶ್ವನಾಥ್ ಜಿ ಎಂದರೆ ಯಾರೆಂದು ಗೊತ್ತಿಲ್ಲ. ನನಗೆ ನೀಡಿರುವ ಒಂದೂವರೆ ಕೋಟಿ ವಾಪಾಸ್ಸು ಕೊಡುತ್ತೇನೆ ಸ್ವಲ್ಪ ಕಾಲವಕಾಶ ಕೊಡಿ, ಈ ವಿಚಾರದಲ್ಲಿ ನನ್ನನ್ನು ಬಿಟ್ಟುಬಿಡಿ ಎಂದು ಹೇಳಿದ್ದಾರೆ.
ಬೆಂಗಳೂರಿನ ರಮೇಶ್ ಮತ್ತು ಧನರಾಜ್ ಎಂಬ ಇಬ್ಬರನ್ನು ಆರ್.ಎಸ್.ಎಸ್. ಸಂಚಾಲಕರು ಎಂದು, ಬೆಂಗಳೂರು ಕೆ.ಆರ್. ಪುರಂ ನ ರಸ್ತೆ ಬದಿಯಲ್ಲಿ ಕಬಾಬ್ ಮಾರಾಟ ಮಾಡುತ್ತಿದ್ದ ಶ್ರೀಕಾಂತ್ ನಾಯಕ್ ಎಂಬಾತನನ್ನು ಬಿ.ಜೆ.ಪಿ. ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ತಯಾರಿ ಮಾಡಿದ್ದಾರೆ. ಬೈಂದೂರು ಟಿಕೆಟ್ ಕೊಡಿಸುವುದಾಗಿ ಒಟ್ಟು ಐದು ಕೋಟಿ ರೂಪಾಯಿ ಪಡೆದಿದ್ದಾರೆ. ಈ ಹಣವನ್ನು ವಾಪಾಸ್ಸು ಕೊಡಿಸಿ ಎಂದು ಉದ್ಯಮಿ ಮೊನ್ನೆ ಸೆಪ್ಟಂಬರ್ 8ರಂದು ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣವನ್ನು ಗಂಭೀರತೆಯಿಂದಾಗಿ ಸಿಸಿಬಿ ಪೊಲೀಸರಿಗೆ ವರ್ಗಾಯಿಸಲಾಗಿತ್ತು. ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಮತ್ತು ಸಹಚರರ ಬಂಧನಕ್ಕಾಗಿ ಬೆಂಗಳೂರು ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು ಎನ್ನಲಾಗಿದೆ.
ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ಉಡುಪಿಗೆ ಬಂದಿದ್ದ ಬೆಂಗಳೂರು ಸಿಸಿಬಿ ಪೊಲೀಸರು ಉಡುಪಿ ಪಾರ್ಕಿಂಗ್ ಏರಿಯಾದಲ್ಲಿ ಚೈತ್ರಾ ಅವರನ್ನು ಬಂಧಿಸಿದ್ದಾರೆ ಅಲ್ಲದೇ ಚೈತ್ರಾ ಜೊತೆಗಿದ್ದ ಶ್ರೀಕಾಂತ್ ನಾಯಕ್ ಹಾಗೂ ಮತ್ತಿಬ್ಬರನ್ನು ಬಂಧಿಸಿದ್ದಾರೆ. ವಿಶೇಷವೆಂದರೆ ಉಡುಪಿಯಲ್ಲಿ ಕಾಂಗ್ರೇಸ್ ಪಕ್ಷದ ವಕ್ತಾರೆ ಅಂಜು ಎಂಬ ಮುಸ್ಲೀಂ ಯುವತಿ ಚೈತ್ರಾ ಕುಂದಾಪುರಳಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದಳು ಎಂದು ತಿಳಿದುಬಂದಿದೆ.
ಚೈತ್ರಾ ಕುಂದಾಪುರ ಹಿಂದೂಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದು, ಇತ್ತೀಚೆಗೆ ರಾಜ್ಯದಾದ್ಯಂತ ತನ್ನ ಪ್ರಖರವಾದ ಮಾತುಗಳಿಂದ ಗುರುತಿಸಿಕೊಂಡಿದ್ದರು. ಹಿಂದೂಪರ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಇವರು ಪ್ರಮುಖ ಭಾಷಣಕಾರರಾಗಿ ಹೋಗುತ್ತಿದ್ದರು. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಇವರು ಹೆಚ್ಚು ಪ್ರಸಿದ್ಧಿ ಪಡೆದಿದ್ದರು.
ಇದೀಗ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನವಾಗಿರುವುದು ಅವರ ಅಭಿಮಾನಿಗಳಿಗೆ ಆಘಾತ ತಂದಿದ್ದು, ಹಿಂದೂಪರ ಸಂಘಟನೆಗಳಿಗೆ ಮುಜುಗರ ಉಂಟುಮಾಡಿದೆ. ಹಾಗೆಯೇ ಚಿಕ್ಕಮಗಳೂರು ಯುವಮೋರ್ಚಾ ಮುಖಂಡ ಗಗನ್ ಕಡೂರು ಎಂಬಾತನ ಹೆಸರು ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವುದು ಜಿಲ್ಲೆಯ ಬಿ.ಜೆ.ಪಿ. ವಲಯಕ್ಕೂ ಮುಜುಗರ ತಂದಿದೆ.