ಕಳೆದ ಕೆಲವು ದಿನಗಳಿಂದ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಉಪಟಳ ನೀಡುತ್ತಿದ್ದ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರನ್ನು ತುಳಿದು ಸಾಯಿಸಿದ್ದ ಒಂಟಿ ಸಲಗವನ್ನು ಸೆರೆಹಿಡಿಯಲಾಗಿದೆ.
ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮದಲ್ಲಿ ಒಂಟಿ ಸಲಗ ಈಗ್ಗೆ ನಾಲ್ಕು ದಿನದ ಹಿಂದೆ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆ ಎರಗಿ ಬಂದು ಕೊಂದು ಹಾಕಿತ್ತು. ಅಲ್ಲದೇ ಮತ್ತಿಬ್ಬರನ್ನು ಗಾಯಗೊಳಿಸಿತ್ತು. ಇದರಿಂದ ಈ ಭಾಗದಲ್ಲಿ ಜನರ ಆಕ್ರೋಶ ಎಲ್ಲೆ ಮೀರಿತ್ತು. ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಿದ ಪರಿಣಾಮ ಉಪಟಳ ನೀಡಿತ್ತಿದ್ದ ಕಾಡಾನೆಯನ್ನು ಸೆರೆಹಿಡಿಯಲಾಗಿದೆ.
ದುಬಾರೆ ಆನೆ ಶಿಬಿರದ ನಾಲ್ಕು ಸಾಕಾನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗಿತ್ತು. ಕೆದಕಲ್ ಸಮೀಪದ ಹೊರೂರು ಎಸ್ಟೇಟ್ ಒಳಗೆ ಇದ್ದ ಸುಮಾರು 18 ವರ್ಷ ವಯಸ್ಸಿನ ಒಂಟಿ ಸಲಗವನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ.
ಡಿಎಫ್ಒ ಪೂವಯ್ಯ, ಎಸಿಎಫ್ ಗೋಪಾಲ್, ಸೋಮವಾರಪೇಟೆ ವಲಯದ ಅರಣ್ಯಾಧಿಕಾರಿ ಚೇತನ್, ಮಡಿಕೇರಿ ವಲಯದ ದೇವಯ್ಯ, ಕುಶಾಲನಗರದ ರಂಜನ್, ಸುಬ್ರಾಯ, ವಿಲಾಸ್ ಸೇರಿದಂತೆ ಆರ್ಆರ್ಟಿ ಮತ್ತು ಇಟಿಎಫ್ ನ 40 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.