ಮೂಡಿಗೆರೆ ತಾಲ್ಲೂಕಿನ ಅತ್ಯಂತ ಹಿರಿಯ ಸರ್ಕಾರಿ ಶಾಲೆಗಳಲ್ಲಿ ಒಂದಾಗಿರುವ ಹಳಿಕೆ-ಬೆಟ್ಟಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ತನ್ನ ಅಮೃತ ಮಹೋತ್ಸವವನ್ನು ಆಚರಿಸಿಕೊಂಡಿದೆ.
ಶಾಲೆ ಪ್ರಾರಂಭವಾಗಿ 75 ವಸಂತಗಳನ್ನು ಪೂರೈಸಿರುವ ಸುಸಂದರ್ಭದಲ್ಲಿ ಊರವರೆಲ್ಲಾ ಸೇರಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿದರು.
ಮಾಜಿ ಸಚಿವ ಬಿ.ಬಿ. ನಿಂಗಯ್ಯನವರುಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ; ಇಂದು ಅನೇಕ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ ಆದರೆ ಸ್ವತಂತ್ರ ಪೂರ್ವದಲ್ಲಿ ಪ್ರಾರಂಭವಾಗಿರುವ ಹಳಿಕೆ ಸರ್ಕಾರಿ ಶಾಲೆಯಲ್ಲಿ ಇಂದಿಗೂ ಅತಿಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು. 75 ವರ್ಷಗಳ ಇತಿಹಾಸವಿರುವ ಹಳಿಕೆ ಶಾಲೆಯಲ್ಲಿ ಕಲಿತವರು ನನ್ನನ್ನು ಸೇರಿದಂತೆ ನೂರಾರು ಜನ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯ ಬೆಳವಣಿಗೆಯಲ್ಲಿ ಸ್ಥಳೀಯ ಗ್ರಾಮಸ್ಥರ ಪಾತ್ರ ಪ್ರಮುಖವಾಗಿದೆ. ಮುಂದಿನ ದಿನಗಳಲ್ಲಿಯು ಈ ಶಾಲೆಯನ್ನು ಉಳಿಸಿಕೊಳ್ಳಬೇಕಾಗಿರುವುದು ಗ್ರಾಮಸ್ಥರ ಹೊಣೆಯಾಗಿದೆ. ಇಂದಿನ ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರಷ್ಟೇ ಪೋಷಕರ ಪಾತ್ರ ಪ್ರಮುಖವಾಗಿದೆ. ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ರೂಪಿಸಬೇಕಾಗಿದೆ ಎಂದರು.
ಮಾಜಿ ಸಚಿವೆ ಶ್ರೀಮತಿ ಮೋಟಮ್ಮ ಮಾತನಾಡಿ ಮಕ್ಕಳ ಭಾಗ್ಯದ ಬಾಗಿಲು ತೆರೆಯುವುದು ಶಿಕ್ಷಣದಿಂದ. ಅಂತಹ ಶಿಕ್ಷಣ ನೀಡಬೇಕಾದುದು ಶಿಕ್ಷಕರು, ಆದ್ದರಿಂದ ಶಿಕ್ಷಕರ ಪಾತ್ರ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖವಾಗಿದೆ, ಶ್ರದ್ಧೆಯಿಂದ ಶಿಕ್ಷಣಕ್ಕೆ ಒತ್ತು ಕೊಟ್ಟರೆ ಎಂತಹ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಖಾಸಗಿ ಶಾಲೆಯ ವ್ಯಾಮೋಹದಿಂದ ಎಲ್ಲರೂ ಸರ್ಕಾರಿ ಶಾಲೆಯನ್ನು ಕಡೆಗಣಿಸುತ್ತಿದ್ದಾರೆ ಇದು ಸರಿಯಲ್ಲಿ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಸಂಪತ್ ಬೆಟ್ಟಗೆರೆ ಸಂಪಾದಕತ್ವದ “ಅಮೃತ ಸಾರಸ್ವತ” ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಾಹಿತಿ ಪ್ರದೀಪ್ ಕೆಂಜಿಗೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಪ್ರಶಂಸೆಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಡಿ.ಡಿ.ಪಿ.ಐ. ರಂಗಸ್ವಾಮಿ, ಬಿ.ಇ.ಓ. ಹೇಮಂತ್ ರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಗೌಡ, ಸಹಕಾರ ಸಂಘದ ಅಧ್ಯಕ್ಷ ರಕ್ಷಿತ್ ಬಡವನದಿಣ್ಣೆ, ನಟೇಶ್ ಗೌಡ, ಡಾ. ರವಿ, ಗ್ರಾ.ಪಂ. ಉಪಾಧ್ಯಕ್ಷೆ ಸುಶೀಲ, ಗ್ರಾ.ಪಂ. ಸದಸ್ಯರಾದ ಬಿ.ಕೆ. ದಿನೇಶ್, ಕುಮಾರ್, ಸುಂದರಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸುರೇಂದ್ರ, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮುಖ್ಯ ಶಿಕ್ಷಕ ದಿಬ್ಬೇಗೌಡ, ಗ್ರಾಮದ ಹಿರಿಯ ಮುಖಂಡರು, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಇಲ್ಲಿಯವರೆಗು ಕಾರ್ಯನಿರ್ವಹಿಸಿದ ಶಿಕ್ಷಕರನ್ನು, ಊರಿನ ಹಿರಿಯರನ್ನು, ಈ ಶಾಲೆಯಲ್ಲಿ ಓದಿ ಉನ್ನತ ಹುದ್ದೆ ಅಲಂಕರಿಸಿರುವ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.