ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸೇರಿ ಮೂವರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಹೊರವಲಯದ ಕಡೂರು ರಸ್ತೆಯ ಕೆಂಗೇನಹಳ್ಳಿ ಗೇಟ್ ಬಳಿ ಕಣಿವೆ ಕ್ರಾಸ್ ನಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತೋರ್ವ ಮಹಿಳೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಚಿಕ್ಕಮಗಳೂರು ನಗರದ ಕುವೆಂಪು ನಗರದ ನಿರಂಜನಮೂರ್ತಿ (47) ಅವರ ಅತ್ತೆ ಚೆನ್ನಮ್ಮ(70) ಸ್ಥಳದಲ್ಲೇ ಮೃತಪಟ್ಟವರು ತೀವ್ರವಾಗಿ ಗಾಯಗೊಂಡಿದ್ದ ರತ್ನಮ್ಮ(67 ವರ್ಷ) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತ ನಿರಂಜನಮೂರ್ತಿ ಅವರ ಪತ್ನಿ ಆಶಾ ಅವರು ನೀಡಿರುವ ದೂರಿನಂತೆ 06/09/2023 ರಂದು ಬುಧವಾರ ಸಂಜೆ ಸಮಯದಲ್ಲಿ ನನ್ನ ಪತಿ ನಿರಂಜನಮೂರ್ತಿ, ರತ್ನಮ್ಮ ರವರು ಅತ್ತೆ ಚೆನ್ನಮ್ಮ ರವರಿಗೆ ಆರೊಗ್ಯ ಸರಿಯಿಲ್ಲದ ಕಾರಣ ಚಿಕಿತ್ಸೆಗೆ ಕಡೂರಿಗೆ ಕೆಎ-18-ಝಡ್-5003 ಕಾರಿನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಚಿಕ್ಕಮಗಳೂರು-ಕಡೂರು ರಸ್ತೆ ಕೆಂಗೇನಹಳ್ಳಿ ಗೇಟ್ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಸೇತುವೆಗೆ ಡಿಕ್ಕಿ ಹೊಡೆಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂರು ಜನರು ಮೃತಪಟ್ಟಿರುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಡಿಕ್ಕಿ ರಭಸಕ್ಕೆ ಕಾರು ಪಲ್ಟಿಯಾಗಿ ನಜ್ಜುಗುಜ್ಜಾಗಿದ್ದು, ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.