ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಲಲಿತಾ ಅವರು ಶಾಲೆಯಲ್ಲಿ ಹಣ ದುರುಪಯೋಗ ಮಾಡಿದ್ದಾರೆ. ಈ ಬಗ್ಗೆ ಬಿಇಒ ಅವರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ತನಿಖೆಗೆ ತೆರೆಳಿದ್ದಾಗ ತನಿಖೆಯಿಂದ ತಪ್ಪಿಸಿಕೊಳ್ಳಲು ದೈವ ಮೈಮೇಲೆ ಬಂದಂತೆ ಹೈಡ್ರಾಮ ಮಾಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ತನಿಖೆ ನಡೆಸಿ ಮುಖ್ಯ ಶಿಕ್ಷಕಿಯನ್ನು ಅಮಾನತ್ತುಗೊಳಿಸಬೇಕೆಂದು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಹೊನ್ನೇಶ್ ಒತ್ತಾಯಿಸಿದರು.
ಅವರು ಮಂಗಳವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ, ಬಿಸಿಊಟ, ಕ್ರೀಡಾ ಸಾಮಾಗ್ರಿಗಳು ವಿದ್ಯಾರ್ಥಿಗಳಿಗೆ ಪಾರದರ್ಶಕವಾಗಿ ಸಿಗುತ್ತಿತ್ತು. ಆದರೆ ಕಳೆದ 2 ವರ್ಷದ ಹಿಂದೆ ಈ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಲಲಿತಾ ಅವರು ಆಗಮಿಸಿದ ಮೇಲೆ ಶಾಲೆ ಮಕ್ಕಳು ಎಲ್ಲಾ ಸವಲತ್ತಿನಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳೆ ನಮಗೆ ವಾರದಲ್ಲಿ 6 ದಿನ ತರಕಾರಿ ಸಾಂಬಾರು ನೀಡದೇ ಕೇವಲ ಬೇಳೆ ಸಾರು ನೀಡುತ್ತಿದ್ದಾರೆ. ಆಟವಾಡಲು ಕ್ರೀಡಾ ಸಾಮಾಗ್ರಿಗಳೇ ಇಲ್ಲ. ಮೊಟ್ಟೆ ಕೂಡ ಕೊಡುತ್ತಿಲ್ಲವೆಂದು ಎಸ್ಡಿಎಂಸಿ ಸಭೆಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಅವ್ಯವಹಾರ ನಡೆಸಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.
ನಮ್ಮ ಶಾಲೆಯಲ್ಲಿ ದಾಸ್ತಾನು ಕೊಠಡಿಯನ್ನು ಪರೀಕ್ಷಿಸಿದಾಗ ಅಕ್ಕಿ, ಬೇಳೆ, ಎಣ್ಣೆ ದಾಸ್ತಾನಿನಲ್ಲಿ ಬಾರಿ ಪ್ರಮಾಣದಲ್ಲಿ ವ್ಯತ್ಯಾಸವಿತ್ತು. ಕ್ರೀಡೆಗೆ, ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ಮೀಸಲಿಟ್ಟಿದ್ದ ಅನುದಾನ ಹಾಗೂ ಸಿಜಿ ಅನುದಾನದಲ್ಲಿ ಬಂದಿದ್ದ 29,802 ರೂ ಹಣ ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೇ ಲಲಿತಾ ಅವರು ಅಕ್ಷರ ದಾಸೋಹದ ಅಧಿಕಾರಿ ಕೂಡ ಆಗಿದ್ದಾರೆ. ಒಂದೇ ಶಾಲೆಯಲ್ಲಿ ಇಷ್ಟೊಂದು ಅಕ್ರಮ ನಡೆಸಿರುವ ಅವರು, ಬೇರೆಲ್ಲಾ ಶಾಲೆಯಲ್ಲಿ ಇನ್ನೆಷ್ಟು ಅಕ್ರಮ ನಡೆಸಿರಬಹುದು? ಹಾಗಾಗಿ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಗ್ರಾಮದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ. ಆಲ್ಲಿ ಚೌಡಮ್ಮ ದೇವಿ ನೆಲೆಸಿದ್ದು, ಇಲ್ಲಿಯವರೆಗೂ ದೇವಿ ಪೂಜೆ ಮಾಡುವವರಿಗೆ ಹಾಗೂ ಗ್ರಾಮದ ಯಾರ ಮೈಮೇಲೂ ಬಂದಿರಲಿಲ್ಲ. ಇದೇ ಮೊದಲು ಶಿಕ್ಷಕಿ ಮೇಲೆ ಬಂದಿದೆ. ಇದು ತನಿಖೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಹೈಡ್ರಾಮ ಎಂದು ಹೇಳಿದರು.
ಗ್ರಾಮದ ಮುಖಂಡರಾದ ಬೆಟ್ಟಗೆರೆ ಶಂಕರ್, ಬಿ.ಕೆ.ಲೋಕೇಶ್ ಉಪಸ್ಥಿತರಿದ್ದರು.