ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಇಲಾಖೆಯ ಅಟೆಂಡರ್ ಒಬ್ಬರು ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಚಿಕ್ಕಮಗಳೂರು ನಗರದ ವ್ಯಕ್ತಿಯೊಬ್ಬರು 8 ಬೈಕ್ ಗಳಿಗೆ ರಾಜ್ಯದಾದ್ಯಂತ ಸಂಚರಿಸಲು ಪರವಾನಿಗಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಜೊತೆಗೆ ಒಂದು ಬೈಕಿಗೆ 500 ರೂಗಳಂತೆ ಸರ್ಕಾರಕ್ಕೆ ಶುಲ್ಕವನ್ನು ಪಾವತಿಸಿದ್ದರು. ಆದರೆ ಅವರಿಗೆ ಪರವಾನಿಗಿ ನೀಡಲು ಚಿಕ್ಕಮಗಳೂರು ಆರ್.ಟಿ.ಓ. ಮಧುರಾ ಅವರು ತಲಾ ಒಂದು ಬೈಕಿಗೆ ಒಂದು ಸಾವಿರದಂತೆ ಒಟ್ಟು 8 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇದರಿಂದ ಕುಪಿತರಾದ ವ್ಯಕ್ತಿ ವಿಚಾರವನ್ನು ಲೋಕಾಯುಕ್ತ ಪೊಲೀಸರಿಗೆ ತಿಳಿಸಿದ್ದರು. ನಂತರ ಸೆಪ್ಟಂಬರ್ 4 ರಂದು ಆರ್.ಟಿ.ಓ. ಕಛೇರಿಗೆ ಬಂದ ವ್ಯಕ್ತಿಗೆ ಮಧುರಾ ಅವರು ಅಟೆಂಡರ್ ಲತಾ ಬಳಿ ಲಂಚ ನೀಡುವಂತೆ ಹೇಳಿದ್ದಾರೆ. ಅದರಂತೆ ಅಧಿಕಾರಿಯ ಮಾತು ಕೇಳಿ ಲಂಚ ಸ್ವೀಕರಿಸಲು ಮುಂದಾದ ಅಟೆಂಡರ್ ಲತಾ ರನ್ನು ಲೋಕಾಯುಕ್ತರು ಬಂಧಿಸಿದ್ದಾರೆ.
ಲಂಚ ಸ್ವೀಕರಿಸುತ್ತಿದ್ದ ಅಟೆಂಡರ್ ಲತಾ ಹಾಗೂ ಚಿಕ್ಕಮಗಳೂರು ಆರ್.ಟಿ.ಓ. ಅಧಿಕಾರಿ ಮಧುರಾ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಇಲಾಖೆ ಭ್ರಷ್ಟಾಚಾರದ ಕೂಪವಾಗಿದ್ದು, ಇಲ್ಲಿ ಹಣವಿಲ್ಲದೇ ಯಾವುದೆ ಕಡತಗಳು ಮುಂದುವರಿಯುವುದಿಲ್ಲ. ಸಾರ್ವಜನಿಕರ ಯಾವುದೆ ಕೆಲಸಗಳಿಗೂ ಲಂಚದ ಬೇಡಿಕೆ ಇಡಲಾಗುತ್ತದೆ ಎಂಬ ದೂರುಗಳು ಹಿಂದಿನಿಂದಲೂ ಕೇಳಿಬಂದಿದ್ದವು. ಇದೀಗ ಲಂಚ ಸ್ವೀಕರಿಸುವಾಗ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಪ್ರಕರಣ ನಡೆದಿದೆ.