ಚಿಕ್ಕಮಗಳೂರು ಜಿಲ್ಲೆಯಲ್ಲಿ ಫಾರಂ ನಂ 50 ಮತ್ತು 53 ಯಲ್ಲಿ ಭೂ ಮಂಜೂರಾತಿಯಲ್ಲಿ ಅನೇಕ ಹಗರಣಗಳು ನಡೆದಿದೆ. ಇದನ್ನು ರಾಜೇಂದ್ರ ಕುಮಾರ್ ಕಠಾರಿಯ ಕಮಿಟಿ ತಂಡ ಸೂಕ್ತ ತನಿಖೆ ನಡೆಸಿ, ಭೂಮಿ ಹಿಂಪಡೆದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಬೇಕೆಂದು ಬಿಎಎಸ್ಪಿ ಜಿಲ್ಲಾ ಸಂಯೋಜಕ ಯು.ಬಿ.ಮಂಜಯ್ಯ ಒತ್ತಾಯಿಸಿದರು.
ಅವರು ಬುಧವಾರ ಮೂಡಿಗೆರೆ ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1981ರಿಂದ 1986ರವರೆಗೆ ದರ್ಕಾಸ್ ಕಮಿಟಿಯಲ್ಲಿ ಮೂಡಿಗೆರೆ ತಾಲೂಕಿನ 5 ಹೋಬಳಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಮಂಜೂರು ಮಾಡಿದ್ದ ಜಮೀನಿನ ಕಡತ ನಾಶಪಡಿಸಿ, ಅದೇ ಜಮೀನನ್ನು 1991ರಿಂದ ಇಲ್ಲಿಯವರೆಗೆ ಫಾರಂ ನಂಬರ್ 50 ಮತ್ತು 53 ಯಲ್ಲಿ ಭೂಮಾಲೀಕರಿಗೆ ಮತ್ತೆ ಮಂಜೂರು ಮಾಡಲಾಗಿದೆ. ನಿಯಮದ ಪ್ರಕಾರ 4.38 ಎಕರೆ ಭೂಮಿ ಉಳ್ಳವರು ಫಾರಂ ನಂಬರ್ 50 ಮತ್ತು 53 ಯಲ್ಲಿ ಭೂಮಿ ಪಡೆಯುವಂತಿಲ್ಲ. ಆದರೆ ಕಾನೂನು ಉಲ್ಲಂಘಿಸಿ ಭೂ ಮಾಲೀಕರ ಕುಟುಂಬದ ಸದಸ್ಯರಿಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಲಾಗಿದೆ. ಈ ಬಗ್ಗೆ ಪಾರದರ್ಶಕವಾದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಂಜುನಾಥ್ ಮಾತನಾಡಿ, ಅಧಿಕಾರಿಗಳ ಬೇಜವಾಬ್ದಾರಿಯಿಂದ ತಾಲೂಕಿನಲ್ಲಿ ದಲಿತರ ಹಾಗೂ ಸರಕಾರಿ ಭೂಮಿಗಳೆಲ್ಲಾ ಭೂ ಮಾಲೀಕರ ಪಾಲಾಗಿದೆ. ಅಲ್ಲದೇ ತಾಲೂಕು ಕಚೇರಿಯಲ್ಲಿ ಮೂಲ ಕಡತಗಳೆ ನಾಶವಾಗಿದೆ. ಮೀಸಲು ಕ್ಷೇತ್ರವಾಗಿರುವ ಮೂಡಿಗೆರೆ ತಾಲೂಕಿನಲ್ಲಿ ದಲಿತರ ಬಗ್ಗೆ ಈ ಹಿಂದಿನ ಹಾಗೂ ಈಗಿನ ಶಾಸಕರಾಗಲಿ ಕಾಳಜಿ ವಹಿಸುತ್ತಿಲ್ಲ. ಹಾಗಾಗಿ ಸರಕಾರ ಭೂಮಿತಿ ಕಾಯಿದೆ ಜಾರಿ ಮಾಡಿ, ಭೂಹೀನರಿಗೆ ಭೂಮಿ ಹಂಚಿಕೆ ಮಾಡಬೇಕು. ತಾಲೂಕಿನಲ್ಲಿ ಭೂಮಿಗೆ ಸಂಬಂಧಿಸಿದ ಹಗರಣವನ್ನು ಈಗ ತನಿಖೆ ಕೈಗೊಂಡಿರುವ ತಂಡ ಸಮರ್ಪಕವಾಗಿ ತನಿಖೆ ನಡೆಸಬೇಕು. ಇಲ್ಲವಾದರೆ ಅವರ ವಿರುದ್ಧವೂ ರಾಜೇಂದ್ರ ಕುಮಾರ್ ಕಠಾರಿ ಅವರ ಬಳಿಗೆ ನಿಯೋಗ ತೆರಳಿ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್, ತಾಲೂಕು ಸಂಯೋಜಕ ಬಿ.ರಾಮು, ಮುಖಂಡರಾದ ಯು.ಬಿ.ನಾಗೇಶ್, ಬಿ.ಎಂ.ಸುಮಿತ್ರ ಉಪಸ್ಥಿತರಿದ್ದರು.