ಜಮೀನಿನಲ್ಲಿ ಬೆಳೆದ ಈರುಳ್ಳಿ ಬೆಳೆ ಸಂಪೂರ್ಣ ನಾಶಹೊಂದಿದ ಕಾರಣದಿಂದ ಸಾಲಕ್ಕೆ ಹೆದರಿ ಅನ್ನದಾತರೊಬ್ಬರುಉ ಸಾವಿಗೆ ಶರಣಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಈ ಮೂಲಕ ವರ್ಷದ ಬರದ ಬೇಗೆಗೆ ಜಿಲ್ಲೆಯಲ್ಲಿ ಮೊದಲ ಜೀವ ಬಲಿಯಾಗಿದೆ.
ಕಡೂರು ತಾಲ್ಲೂಕಿನ ಗಿರಿಯಾಪುರ ಗ್ರಾಮದ ರೈತ ಸತೀಶ್ (48 ವರ್ಷ) ಆತ್ಮಹತ್ಯೆಗೆ ಶರಣಾದವರು.
ತನ್ನ ಎರಡು ಎಕರೆ ಜಮೀನಿನಲ್ಲಿ ಸಾಲ ಮಾಡಿ ಈರುಳ್ಳಿ ಬಿತ್ತನೆ ಮಾಡಿದ್ದರು ಎನ್ನಲಾಗಿದೆ. ಭೂಮಿಗೆ ಬಿತ್ತಿದ ಈರುಳ್ಳಿ ಮಳೆಯ ಕೊರತೆಯಿಂದ ಗೆಡ್ಡೆಕಟ್ಟದೇ ಸಂಪೂರ್ಣ ನಾಶವಾಗಿದೆ ಎನ್ನಲಾಗಿದೆ. ಈರುಳ್ಳಿ ಬೆಳೆ ಬೆಳೆಯಲು ಸಾಲ ಮಾಡಿಕೊಂಡಿದ್ದ ಸತೀಶ್ ಬೆಳೆನಾಶದಿಂದ ಸಾಲಕಟ್ಟಲು ದಾರಿ ಕಾಣದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಮೀನಿನಲ್ಲಿಯೇ ಹುಣಸೆ ಮರಕ್ಕೆ ನೇಣುಬಿಗಿದುಕೊಂಡು ಸತೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ಸಾವಿನಿಂದ ಕುಟುಂಬ ದಿಕ್ಕುತೋಚದಂತಾಗಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.