ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಸರಕಾರಿ ಶಾಲೆಯಲ್ಲಿ ನಿನ್ನೆ ಹೈಡ್ರಾಮ ನಡೆದುಹೋಯಿತು. ಶಾಲೆಯಲ್ಲಿ ಅಧಿಕಾರಿ ದುರುಪಯೋಗ, ಹಣದುರುಪಯೋಗ ಬಗ್ಗೆ ಎಸ್.ಡಿ.ಎಂ.ಸಿ. ಅಧ್ಯಕ್ಷರು ನೀಡಿದ್ದ ದೂರಿನ ಮೇಲೆ ತನಿಖೆ ಕೈಗೊಳ್ಳಲು ಬಂದಿದ್ದ ಬಿ.ಇ.ಓ. ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಎದುರು ಮುಖ್ಯ ಶಿಕ್ಷಕಿ ಮೈಮೇಲೆ ಗ್ರಾಮದ ದೇವತೆ ಪ್ರವೇಶ ಮಾಡಿ ಮಾತನಾಡಿ ಅಚ್ಚರಿ ಮೂಡಿಸಿದರು.
ಬಿ.ಇ.ಓ. ಅವರು ತನಿಖೆ ಅಂಗವಾಗಿ ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದಾಗ ಇದ್ದಕ್ಕಿದಂತೆ ಪಕ್ಕದಲ್ಲಿ ಕುಳಿತ್ತಿದ್ದ ಮುಖ್ಯ ಶಿಕ್ಷಕಿ ಲಲಿತಾ ಅವರು ಕಣ್ಣು ಮುಚ್ಚಿಕೊಂಡು ಮಾತನಾಡಲು ಶುರು ಮಾಡಿದ್ದರು.
ನಾನು ಗ್ರಾಮದೇವತೆ, ಗ್ರಾಮದಲ್ಲಿ ಯರ್ಯಾರು ಇದ್ದಾರೆ? ಏನು ಮಾಡುತ್ತಿದ್ದಾರೆಂಬುದು ಎಲ್ಲಾ ನನಗೆ ಗೊತ್ತು. ನನಗೆ ದೇವಸ್ಥಾನ ಕಟ್ಟಿಸಿಕೊಡಬೇಕು. ಅಲ್ಲಿಯವರೆಗೆ ಗ್ರಾಮಕ್ಕೆ ಬೆಂಕಿ ಹಾಕಿಕೊಂಡೇ ಕೂರುತ್ತೇನೆ. ಈ ಶಾಲೆ ನಡೆಯಬಾರದು. ಯಾರೂ ಬರಬಾರದು. ನಾನು ಯಾರನ್ನೂ ಬಿಡುವುದಿಲ್ಲ, ನಾವು ಒಂಬತ್ತು ಮಂದಿ ಇದ್ದೇವೆ, ನಮಗೆ ಗುಡಿ ಕಟ್ಟಿಲ್ಲ. ಈ ಶಾಲೆಯನ್ನು ನಡೆಯಲು ಬಿಡುವುದಿಲ್ಲ. ಇದು ನನ್ನ ಜಾಗ. ನನ್ನ ಜಾಗದ ಮೇಲೆ ನನಗೆ ಅಧಿಕಾರವಿದೆ. ಯಾರಿಗೂ ಬರೋಕೆ ಬಿಡಲ್ಲ. ಇವತ್ತು ನನಗೆ ಪೂಜೆ ಆಗಬೇಕಿತ್ತು. ಪೂಜೆ ಮಾಡಿಸಿಲ್ಲ. ಮುಳ್ಳಿನ ಜಾಗದಲ್ಲಿ ಕುಳಿತಿದ್ದೇನೆ.
ದೇವಸ್ಥಾನ ಉದ್ಘಾಟನೆಗೊಂಡು ಪೂಜೆ ಆಗುವವರೆಗೂ ಇಲ್ಲಿ ಯಾರಿಗೂ ಬಿಡುವುದಿಲ್ಲ. ಈ ಶಾಲೆ ಮುಂದೆ ಹೋಗಲು ಬಿಡಲ್ಲ. ಮಕ್ಕಳು, ಶಿಕ್ಷಕರು ಯಾರೂ ಇಲ್ಲದ ಹಾಗೆ ಮಾಡುತ್ತೇನೆ. ನನ್ನ ತೀರ್ಮಾನದ ಮುಂದೆ ಯಾರ ತೀರ್ಮಾನವೂ ಇಲ್ಲ. ನಿಂಗಯ್ಯ ಅವರನ್ನಂತೂ ಬಲಿ ತೆಗೆದುಕೊಳ್ಳದೇ ಬಿಡುವುದಿಲ್ಲವೆಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ರೀತಿಯಲ್ಲಿ ಮಾತನಾಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬೆಟ್ಟಗೆರೆ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಲಲಿತ ಅವರು ವಿರುದ್ಧ ಎಸ್ಡಿಎಂಸಿ ಸದಸ್ಯರು ದೂರು ನೀಡಿದ್ದ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಬಿಎಒ ಹೇಮಂತರಾಜ್ ಮತ್ತು ಸಿಬ್ಬಂದಿ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ನಡೆದ ಈ ಅನಿರೀಕ್ಷಿತ ಘಟನೆಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿ ಮರಳಿ ವಾಪಾಸಾಗಿದ್ದಾರೆ.
ತನಿಖೆಯಿಂದ ತಪ್ಪಿಸಿಕೊಳ್ಳಲು ಮುಖ್ಯಶಿಕ್ಷಕಿ ಮೈಮೇಲೆ ಗ್ರಾಮದೇವತೆ ಬಂದಂತೆ ನಾಟಕವಾಡಿದ್ದಾರೆ ಎಂದು ಹೇಳಲಾಗುತ್ತದೆ. ಮಾಜಿ ಸಚಿವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಮತ್ತು ಇಲಾಖ ಅಧಿಕಾರಿಗಳ ಎದುರೆ ಈ ರೀತಿ ವರ್ತಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಮೇಲಾಧಿಕಾರಿಗಳು ಈ ಬಗ್ಗೆ ಏನು ಕ್ರಮ ಜರುಗಿಸುತ್ತಾರೆ ಕಾದು ನೋಡಬೇಕು.