ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆ.ಆರ್.ಎಸ್) ಪಕ್ಷದ ವತಿಯಿಂದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಬೆಳ್ತಂಗಡಿಯಿಂದ ಬೆಂಗಳೂರಿಗೆ ಸೌಜನ್ಯಾ ಅತ್ಯಾಚಾರ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಜಾಥಾವು ನಿನ್ನೆ ಕೊಟ್ಟಿಗೆಹಾರ ತಲುಪಿತು.
ಕೊಟ್ಟಿಗೆಹಾರದಲ್ಲಿ ಪ್ರತಿಭಟನಾ ಜಾಥಾದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ಮಾತನಾಡಿ ‘ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ನಡೆದು 11ವರ್ಷವಾದರೂ ಈವರೆಗೆ ಕೊಲೆ ಮಾಡಿದವರನ್ನು ಸರ್ಕಾರ ಬಂಧಿಸಲಾಗಿಲ್ಲ. ಅಮಾಯಕನನ್ನೂ ಬಂಧಿಸಿ ಬಿಡಲಾಗಿದೆ. ಬಡವರ ಹೆಣ್ಣು ಮಕ್ಕಳ ಅತ್ಯಾಚಾರ ಷೋಷಣೆ ನಿಲ್ಲಬೇಕು. ಅತ್ಯಾಚಾರವನ್ನು ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕು. ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯಾವ ಒತ್ತಡಕ್ಕೂ ಮಣಿಯದೇ ಮರು ತನಿಖೆಗೆ ಆದೇಶಿಸಬೇಕು. ಸೌಜನ್ಯ ಮಹಿಳಾ ಆಯೋಗ ಸ್ಥಾಪನೆಯಾಗಬೇಕು. ಸೌಜನ್ಯ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿದ ತನಿಖಾಧಿಕಾರಿ ವಿರುದ್ದ ತನಿಖೆಯಾಗಬೇಕು. ಪ್ರಕರಣದ ದಾರಿ ತಪ್ಪಿಸಿದ ಪೊಲೀಸರ ಕ್ರಮಕ್ಕೂ ಶಿಕ್ಷೆಯಾಗಬೇಕು. ಎಲ್ಲಾ ಮಕ್ಕಳ ಮತ್ತು ಮಹಿಳಾ ದೌರ್ಜನ್ಯ ಸಂಬಂಧಿತ ಪ್ರಕರಣಗಳು ಪ್ರಾಮುಖ್ಯತೆ ಮೇಲೆ ನಿಗದಿತ ಸಮಯದಲ್ಲಿ ಬಗೆಹರಿಯಬೇಕು. ಮಕ್ಕಳ ಮತ್ತು ಮಹಿಳೆಯರ ಅತ್ಯಾಚಾರ ದೌರ್ಜನ್ಯಗಳನ್ನು ತನಿಖೆ ಮಾಡಲು ವಿಶೇಷ ತನಿಖಾ ಸಂಸ್ಥೆ ರಚನೆಯಾಗಬೇಕು. ಸೌಜನ್ಯ ನಮ್ಮೆಲ್ಲರ ಮಗಳೆಂದು ಭಾವಿಸಿ ಸೌಜನ್ಯ ಪರ ಎಲ್ಲರೂ ಧ್ವನಿಗೂಡಿಸಬೇಕು. ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸುವಂತಾಗಬೇಕು’ ಎಂದು ಅವರು ಆಗ್ರಹಿಸಿದರು. ಪ್ರತಿಭಟನಾ ನಡಿಗೆ ಜಾಥಾದಲ್ಲಿ ಕೆ ಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಬೆಳಿಗ್ಗೆಯಿಂದ ಸಂಜೆವರೆಗೆ ಸೌಜನ್ಯ ಪ್ರಕರಣ ನ್ಯಾಯಕ್ಕಾಗಿ ಮೌನಾವೃತ ಕೈಗೊಂಡಿದ್ದು ಜಾಥಾದಲ್ಲಿ ಸೌಜನ್ಯಗೆ ನ್ಯಾಯ ಒದಗಿಸುವಂತೆ ಜನರಿಗೆ ನಮಸ್ಕರಿಸಿದರು. ಜಾಥಾದಲ್ಲಿ ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ, ಸಿ.ಎನ್.ದೀಪಕ್, ರಘುಪತಿ, ಮಲ್ಲಿಕಾರ್ಜುನ್ ಭಟ್ರಳ್ಳಿ, ಆರೋಗ್ಯಸ್ವಾಮಿ, ಜೀವನ್, ಎನ್ ಮೂರ್ತಿ, ರವಿಕುಮಾರ್, ಮೋಹನ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.