ಪಾಪಿ ಮಗನೊಬ್ಬ ಹೆತ್ತ ತಂದೆ ತಾಯಿಗೆ ಆಹಾರದಲ್ಲಿ ವಿಷವಿಕ್ಕಿ ಕೊಲೆಮಾಡಿದ ಪ್ರಕರಣ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಕೊಣನೂರು ಸಮೀಪದ ಅಕ್ಕಲವಾಡಿಯಲ್ಲಿ ನಂಜುಂಡಪ್ಪ (55), ಉಮಾ (45) ದಂಪತಿ ಆಗಸ್ಟ್ 23ರಂದು ಒಂದೇ ದಿನದಲ್ಲಿ ಅಸಹಜವಾಗಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೀಗ ತಿರುವು ಸಿಕ್ಕಿದ್ದು, ಮಗನೇ ತನ್ನನ್ನು ಹೆತ್ತ ತಂದೆ ತಾಯಿಗೆ ವಿಷವಿಕ್ಕಿ ಕೊಲೆಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆಗಸ್ಟ್ 15 ರಂದು ಮನೆಯಲ್ಲಿ ತಯಾರಿಸಿದ್ದ ಪಲಾವ್ ತಿಂದಿದ್ದು ನಂಜುಂಡಪ್ಪ ದಂಪತಿ ಅಸ್ವಸ್ಥಗೊಂಡು, ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆಗಸ್ಟ್ 23ರಂದು ಆಸ್ಪತ್ರೆಯಿಂದ ಮನೆಗೆ ವಾಪಾಸಾಗುವ ವೇಳೆ ಮೃತಪಟ್ಟಿದ್ದಾರೆ.
ದಂಪತಿಗಳ ಸಾವಿನ ಬಗ್ಗೆ ಅನುಮಾನಗೊಂಡ ಮೂರನೇ ಮಗ ಜೈರಾಜ್ ಕೊಣನೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ತನಿಖೆ ನಡೆಸುತ್ತಾ ಹೋದ ಪೊಲೀಸರಿಗೆ ದಂಪತಿಗಳ ಮೊದಲ ಮಗ ಮಂಜುನಾಥ ತನ್ನ ತಂದೆ ತಾಯಿಗೆ ಆಹಾರದಲ್ಲಿ ವಿಷಬೆರಸಿಕೊಟ್ಟು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿಯು ಮನೆ ಕಟ್ಟಲು ತಾಯಿ ಉಮಾ ಹೆಸರಿನಲ್ಲಿ ಮಹಿಳಾ ಸಂಘಗಳಿಂದ ಸಾಲ ಪಡೆದಿದ್ದ ಜೊತೆಗೆ ಕೈ ಸಾಲಗಳನ್ನು ಮಾಡಿದ್ದ. ತಂದೆ ತಾಯಿಗಳು ಬದುಕಿದ್ದರೆ ಸಾಲ ತೀರಿಸಬೇಕಾಗುತ್ತದೆ. ಸತ್ತರೆ ಸಾಲ ವಜಾಗೊಳ್ಳುತ್ತದೆ ಎಂದು ಭಾವಿಸಿ ಮನೆಯಲ್ಲಿ ಮಾಡಿದ್ದು ಪಲಾವ್ ಅನ್ನು ತಾನು ತಿಂದು ಉಳಿದದ್ದಕ್ಕೆ ಕಳೆನಾಶಕವನ್ನು ಬೆರೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲ ಮನ್ನಾ ಆಗುತ್ತದೆ ಎಂಬ ದುರಾಸೆಯಿಂದ ತನ್ನ ಹೆತ್ತವರನ್ನೆ ವಿಷವಿಕ್ಕಿ ಕೊಂದ ಪಾಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕೊಣನೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.