ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ನೆಮ್ಮಾರಿನ ಮಹಿಳೆಯೊಬ್ಬರು ಐದು ತಿಂಗಳ ಹಿಂದೆ ಕಾಣೆಯಾಗಿದ್ದರು. ತಾಯಿಯನ್ನು ಹುಡುಕಿ ಕೊಡುವಂತೆ ಆಕೆಯ ಮಕ್ಕಳು ಶೃಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಕಾಣೆಯಾಗಿದ್ದ ಮಹಿಳೆ ಕೊಲೆಯಾಗಿರುವ ಅಂಶ ಬೆಳಕಿಗೆ ಬಂದಿದೆ. ಪ್ರಕರಣವನ್ನು ಪೊಲೀಸರು ಭೇಧಿಸಿದ್ದು, ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.
ಕಾಣೆಯಾಗಿದ್ದ ಮಹಿಳೆಯ ಹೆಸರು ವಾಸಂತಿ(45 ವರ್ಷ) ಶೃಂಗೇರಿ ತಾಲ್ಲೂಕಿನ ನೆಮ್ಮಾರಿನವರು. ಮಾರ್ಚ್ 29ರಂದು ಪಟ್ಟಣಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ವಾಸಂತಿ ಮರಳಿಬಂದಿರಲಿಲ್ಲ. ಆದಾದ ನಂತರ ಮಹಿಳೆ ಏನಾದರು ಎನ್ನುವುದು ಆ ಕುಟುಂಬದವರಿಗೆ ಗೊತ್ತಿರಲಿಲ್ಲ. ಆಕೆಯ ಗಂಡ ಕೂಡ ಮರಣಹೊಂದಿ 15 ವರ್ಷ ಅಗಿತ್ತು. ಇಬ್ಬರು ಮಕ್ಕಳಿದ್ದು, ತಾಯಿಗಾಗಿ ಎಲ್ಲಾ ಕಡೆ ಹುಡುಕಾಡಿ ಕೊನೆಗೆ ಶೃಂಗೇರಿ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಯ ಪತ್ತೆಗೆ ನೆರವಾದ ಪೋನ್ ಡೀಟೆಲ್ಸ್
ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಕೊನೆಗೂ ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ. ಮಹಿಳೆಯ ಮೊಬೈಲ್ ಕಾಲ್ ಡೀಟೈಲ್ಸ್ ಪಡೆದುಕೊಂಡು ತನಿಖೆ ಆರಂಭಿಸಿದಾಗ ಅವರಿಗೆ ಒಂದು ಮೊಬೈಲ್ ಸಂಖ್ಯೆಯ ಬಗ್ಗೆ ಅನುಮಾನ ಶುರುವಾಗುತ್ತದೆ. ಮಹಿಳೆಯ ಮೊಬೈಲ್ ಗೆ ಹೆಚ್ಚು ಸಂಪರ್ಕ ಹೊಂದಿದ್ದ ಆ ಮೊಬೈಲ್ ನಂಬರ್ ನ ವ್ಯಕ್ತಿಯನ್ನು ಹುಡುಕಿಕೊಂಡು ಹೋದ ಪೊಲೀಸರು ಬಂದು ತಲುಪಿದ್ದು ಕಳಸ ಮೂಲದ ಪ್ರಕಾಶ್ ಲೋಬೋ ಎಂಬಾತನಲ್ಲಿಗೆ. ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಆತ ಭಯಾನಕ ಸತ್ಯವನ್ನು ಬಾಯಿಬಿಟ್ಟಿದ್ದಾನೆ.
ಕಳಸ ಮೂಲದ ಬೀದಿಮನೆಯ ಪ್ರಕಾಶ್ ಲೋಬೋ ಬಂಧಿತ ಆರೋಪಿ ಆಗಿದ್ದಾನೆ. ಪ್ರಕಾಶ್ ತ್ಯಾವಣದ ಪ್ಲಾಂಟೇಶನ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.
ಕೊಲೆ ಮಾಡಿ ಮರದಡಿ ಹೂತಿಟ್ಟಿದ್ದ
ತನಿಖೆಯಿಂದ ತಿಳಿದುಬಂದಂತೆ ಕೊಲೆಯಾದ ಮಹಿಳೆ ಮತ್ತು ಪ್ರಕಾಶ್ ನಡುವೆ ಅಕ್ರಮ ಸಂಬಂಧವಿತ್ತೆಂದು ತಿಳಿದುಬಂದಿದೆ. ಇತ್ತೀಚೆಗೆ ಪ್ರಕಾಶನಿಗೆ ಬೇರೆ ಯುವತಿಯೊಂದಿಗೆ ಮದುವೆ ಆಗಿರುತ್ತದೆ. ಆಗ ವಾಸಂತಿ ಪ್ರಕಾಶನ ಜೊತೆ ಗಲಾಟೆಗೆ ಶುರುವಿಟ್ಟುಕೊಳ್ಳುತ್ತಾಳೆ. ನನ್ನೊಂದಿಗೆ ಸಂಬಂಧವಿಟ್ಟುಕೊಂಡು ಹೇಗೆ ಬೇರೆ ಮದುವೆಯಾದೆ ಎಂದು ಪ್ರಕಾಶನೊಂದಿಗೆ ಜಗಳ ಮಾಡುತ್ತಾಳೆ. ಒಂದು ದಿನ ಮಾತಿಗೆ ಮಾತು ಬೆಳೆದು ಅದು ತಾರಕಕ್ಕೆ ಹೋಗುತ್ತದೆ. ಆಗ ಪ್ರಕಾಶ ಕೋಪಗೊಂಡು ವಾಸಂತಿಯ ಮೇಲೆ ತೀವ್ರ ಹಲ್ಲೆ ಮಾಡುತ್ತಾನೆ. ಬಲವಾದ ಪೆಟ್ಟಿನಿಂದ ವಾಸಂತಿ ಸಾವನ್ನಪ್ಪುತ್ತಾಳೆ. ಇದರಿಂದ ಗಾಬರಿಗೊಂಡ ಪ್ರಕಾಶ ಶೃಂಗೇರಿಯ ತ್ಯಾವಣ ಅರಣ್ಯದಲ್ಲಿ ಮರದ ಬುಡವೊಂದರಲ್ಲಿ ಗುಂಡಿ ತೆಗೆದು ಆಕೆಯ ಶವವನ್ನು ಹೂತು ಹಾಕುತ್ತಾನೆ.
ಇದೀಗ ಪೊಲೀಸರ ವಿಚಾರಣೆ ವೇಳೆ ಘಟನೆಯ ಪೂರ್ಣ ಮಾಹಿತಿ ನೀಡಿದ್ದು ಆತನ ಮಾಹಿತಿಯ ಮೇರೆಗೆ ಅರಣ್ಯದಲ್ಲಿ ಹೂತಿಟ್ಟಿದ್ದ ಶವವನ್ನು ನಿನ್ನೆ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್, ತಹಶೀಲ್ದಾರ್ ಪಿ.ಗೌರಮ್ಮ ಭೇಟಿ ನೀಡಿ ಪರೀಸಿಲಿಸಿದರು. ತನಿಖಾಧಿಕಾರಿಯಾಗಿ ಸಬ್ಇನ್ಸ್ಪೆಕ್ಟರ್ ಭರ್ಮಪ್ಪ ಬೆಳಗಲಿ ಪ್ರಕರಣವನ್ನು ಬೆನ್ನು ಹತ್ತಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಲಾಯದ ವಿಜ್ಞಾನಿಗಳು ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ.
ಇದೀಗ ಅಕ್ರಮ ಸಂಬಂಧದ ಸುಳಿಗೆ ಸಿಲುಕಿ ಪ್ರಕಾಶ ಜೈಲು ಪಾಲಾಗಿದ್ದಾನೆ. ಆತನಿಗೆ ಇತ್ತೀಚೆಗಷ್ಟೇ ವಿವಾಹವಾಗಿದ್ದು ಮದುವೆಯಾಗಿದ್ದ ಮಹಿಳೆಯ ಬದುಕು ಸಂಕಷ್ಟಕ್ಕೆ ಸಿಲುಕಿದೆ. ವಾಸಂತಿಯ ಇಬ್ಬರು ಮಕ್ಕಳು ತಬ್ಬಲಿಯಾಗಿದ್ದಾರೆ.