ಈ ಮೇಲಿನ ಚಿತ್ರದಲ್ಲಿ ಕಾಣುವುದು ಹಿಮಾಚಲದ ತಪ್ಪಲಿನ ದೃಶ್ಯಗಳಲ್ಲ. ನಮ್ಮ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುಂಬಳಡಿಕೆ ಗ್ರಾಮದ್ದು. ಈ ಗ್ರಾಮ ಕಾಡಂಚಿನ ಕುಗ್ರಾಮ. ಕುಡಿಯೋಕೆ ನೀರಿಲ್ಲ. ಓಡಾಡೋಕೆ ರಸ್ತೆ ಇಲ್ಲ. ಕರೆಂಟ್ ಕೇಳೋದೇ ಬೇಡ. ಇನ್ನು ಮಕ್ಕಳಿಗೆ ವಿದ್ಯಾಭ್ಯಾಸ ಅನ್ನೋದು ಮರಿಚೀಕೆಯೇ ಸರಿ. ಈ ನತದೃಷ್ಟ ಕುಗ್ರಾಮದ ಈ ಬದುಕು ಸ್ವತಂತ್ರ ಬಂದು ಏಳೂವರೆ ದಶಕಗಳೇ ಕಳೆದರೂ ಅವ್ರು ಇಂದಿಗೂ ನಿರ್ಗತಿಕರು-ನಿರಾಶ್ರಿತರಂತೆಯೇ ಬದುಕುತ್ತಿದ್ದಾರೆ.
ಸರ್ಕಾರ ಇದುವರೆಗೂ ಇವರಿಗೆ ಸೂಕ್ತ ನಿವೇಶನ, ವಸತಿ ವ್ಯವಸ್ಥೆ ಮಾಡಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಸರ್ಕಾರಿ ಜಮೀನೊಂದರಲ್ಲಿ ಹೀಗೆ ತಾತ್ಕಾಲಿತ ಟೆಂಟ್ ಹಾಕಿಕೊಂಡು ಬದುಕು ನಡೆಸುತ್ತಿದ್ದಾರೆ. ಈ ಹಿಂದಿನ ಶಾಸಕರು ಇವರಿಗೆ ನಿವೇಶನ ನೀಡುವ ಭರವಸೆಯೊಂದಿಗೆ ಜಾಗ ಗುರುತು ಮಾಡಿದ್ದರು. ಆ ಜಾಗದಲ್ಲಿ ಜನರು ನಿವೇಶನ ಗುರುತು ಮಾಡಿಕೊಂಡು ಟೆಂಟ್ ಹಾಕಿ ಜೀವನ ನಡೆಸುತ್ತಿದ್ದಾರೆ. ಆದರೆ ಅವರಿಗೆ ಇದುವರೆಗೂ ನಿವೇಶನದ ದಾಖಲೆ ನೀಡಲಾಗಿಲ್ಲ.
ಇದರಿಂದ ಅವರು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ರೋಸಿಹೋಗಿರುವ ಇಲ್ಲಿನ ಜನರು ಈಗ ಪ್ರಧಾನಮಂತ್ರಿಯವರ ಮೊರೆ ಹೋಗಿದ್ದಾರೆ.
ಮೋದಿಗೆ ಪತ್ರ ಬರೆದ ಗ್ರಾಮಸ್ಥರು:
ಕುಂಬಳಡಿಕೆ ಗ್ರಾಮದಲ್ಲಿ ಬರೋಬ್ಬರಿ 70ಕ್ಕೂ ಹೆಚ್ಚು ಕುಟುಂಬಗಳಿವೆ. ಇಲ್ಲಿನ ಜನ ಹಲವು ದಶಕಗಳಿಂದ ಇದೇ ಟಾರ್ಪಲ್ ನಲ್ಲೇ ಬದುಕ್ತಿರೋದು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಜನಪ್ರತಿನಿಧಿಗಳಿಗೆ ಮನವಿ ಮಾಡಿ…ಮಾಡಿ… ಸುಸ್ತಾದ ಈ ಗಿರಿಜನರು ಇದೀಗ ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಿದ್ದಾರೆ. ಖುದ್ದು ಗ್ರಾಮಸ್ಥರೇ ಪ್ರಧಾನಿಗೆ ಪತ್ರ ಬರೆದು ತಮ್ಮ ಗ್ರಾಮದ ಸಮಸ್ಯೆ ಹೇಳಿಕೊಂಡಿದ್ದಾರೆ. ಹಳ್ಳಿಗರ ನೋವಿಗೆ ಎಚ್ಚೆತ್ತ ಪ್ರಧಾನಿ ಕಾರ್ಯಾಲಯ ಇದೀಗ ಸಂತ್ರಸ್ಥರ ನೆರವಿಗೆ ನಿಂತಿದೆ. ಮುಂದಿನ ಹತ್ತು ದಿನದಲ್ಲಿ ಖುದ್ದು ಪ್ರಧಾನಿ ಮೋದಿಯೇ ನಿಮಗೆ ಕರೆ ಮಾಡಿ ಸಮಸ್ಯೆ ಆಲಿಸುತ್ತಾರೆ ಎಂದು ಪ್ರಧಾನಿ ಕಾರ್ಯಾಲಯದಿಂದ ತಿಳಿಸಿರುವುದಕ್ಕೆ ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ನಿಮಗೆ ಏನು ಬೇಕು ಅಂತ ಕಳೆದ 10 ವರ್ಷದಿಂದ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಯಾಗಲಿ ಬಂದಿಲ್ಲ. ಯಾರಾದ್ರು ಬಂದರೆ ಸಮಸ್ಯೆ ಹೇಳಿಕೊಳ್ಳಬಹುದು. ಯಾರೂ ಬರದಿದ್ರೆ ಹೇಗೆ ಹೇಳೋದು. ನಾವು ಹೇಳಿ…ಹೇಳಿ… ಸಾಕಾಗಿದೆ ಎಂದು ಹಳ್ಳಿಗರ ತಮ್ಮ ಅಸಹಾಯಕ ಸ್ಥಿತಿಯನ್ನ ಹೊರಹಾಕುತ್ತಿದ್ದಾರೆ. ಇಲ್ಲಿ ಟಾರ್ಪಲ್ ಕಟ್ಟಿಕೊಂಡು ಬದುಕ್ತಿರೋರೆ ಹೆಚ್ಚಿದ್ದಾರೆ. ಜೋರು ಮಳೆ ಬಂದ್ರೆ ಮನೆಯೊಳಗೆ ನೀರು ನಿಲ್ಲುತ್ತೆ. ಆ ರೀತಿ ಬದುಕ್ತಿದ್ದಾರೆ ಇಲ್ಲಿನ ಜನ. ಕರೆಂಟ್ ಇಲ್ಲ. ಸೀಮೆಎಣ್ಣೆಯೂ ಸಿಗಲ್ಲ. ಇಲ್ಲಿನ ಜನ ಡಿಸೇಲ್ನಲ್ಲಿ ದೀಪ ಉರಿಸಿಕೊಂಡು ಬದುಕ್ತಿದ್ದಾರೆ. ಮಕ್ಕಳು ಓದೋದು ಕೂಡ ಅದೇ ಡಿಸೇಲ್ ಬೆಳಕಲ್ಲಿ.
ಹಾಗಾಗಿ, ಹಲವು ವರ್ಷಗಳಿಂದ ತಮ್ಮ ಸ್ಥಳೀಯ ಜನಪ್ರತಿನಿಧಿಗಳಿಗೆ ತಮ್ಮ ಸಂಕಷ್ಟ ಹೇಳಿ ರೋಸಿ ಹೋದ ಜನ ನಮ್ಮ ಪಾಲಿಗೆ ಪ್ರಧಾನಿಯಾದ್ರು ಇದ್ದಾರಾ ಎಂದು ಪತ್ರ ಬರೆದಿದ್ದಾರೆ. ಕೂಡಲೇ ಪ್ರಧಾನಿ ಕಾರ್ಯಾಲಯದಿಂದ ಪತ್ರ ಬಂದಿದ್ದು, ಗಿರಿಜನರ ಸಂಕಷ್ಟಕ್ಕೆ ನೆರವಾಗಲು ಮುಂದಾಗಿದ್ದಾರೆ. ಜಿಲ್ಲಾಡಳಿತ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಲು ಮುಂದಾಗಿದ್ದಾರೆ. ಆದರೆ, ಆ ವಿಷಯ ಸ್ಥಳಿಯ ಆಡಳಿತಕ್ಕೆ ತಿಳಿಯದಿರುವುದು ಗ್ರಾಮಸ್ಥರ ನೋವಿಗೆ ಕಾರಣವಾಗಿದೆ. ಒಟ್ಟಾರೆ, ಗ್ರಾಮಸ್ವರಾಜ್ಯ, ಗ್ರಾಮ ನೈರ್ಮಲ್ಯ, ಗ್ರಾಮ ರಾಮರಾಜ್ಯ ಅಂತೆಲ್ಲಾ ವೇದಿಕೆ ಮೇಲೆ ಮಾರುದ್ಧ ಭಾಷಣ ಬಿಗಿಯೋ ಜನಪ್ರತಿನಿಧಿಗಳು ಜಾಗ ನೀಡಿದ ಮೇಲೆ ಕನಿಷ್ಟ ಮೂಲಭೂತ ಸೌಕರ್ಯ ನೀಡದಿರೋದು ನಿಜಕ್ಕೂ ದುರಂತ. ಈಗ ಪ್ರಧಾನಿ ಕಾರ್ಯಲಯದಿಂದ ಹಳ್ಳಿಗರ ಪತ್ರಕ್ಕೆ ಉತ್ತರವೇನೋ ಬಂದಿದೆ. ಆದ್ರೆ, ಕೆಲಸ ಆಗುತ್ತೋ ಇಲ್ವೋ ಗೊತ್ತಿಲ್ಲ.