ಮೂಡಿಗೆರೆ ಸಮೀಪದ ಬಡವನದಿಣ್ಣೆ ಗ್ರಾಮದಲ್ಲಿ ಎರಡು ಕಾಡಾನೆಗಳು ಹಾಡಹಗಲೇ ಸುತ್ತಾಟ ನಡೆಸುತ್ತಿವೆ. ಗ್ರಾಮದ ಗದ್ದೆ, ತೋಟಗಳಲ್ಲಿ ಎರಡು ಕಾಡಾನೆಗಳು ಅತ್ತಿಂದಿತ್ತ ಸುತ್ತುತ್ತಿವೆ. ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಬಡವನದಿಣ್ಣೆ ಮೂಡಿಗೆರೆ ಕೊಟ್ಟಿಗೆಹಾರ ಮುಖ್ಯ ರಸ್ತೆ ವಿಲ್ಲೂಪುರಂ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇದೆ. ಹಾಗಾಗಿ ಆನೆಗಳು ಮುಖ್ಯರಸ್ತೆಗೆ ಬರುವ ಆತಂಕ ಎದುರಾಗಿದೆ.
ನಿನ್ನೆ ರಾತ್ರಿಯಿಂದ ಕಾಡಾನೆಗಳು ಗ್ರಾಮದಲ್ಲಿ ಬೀಡುಬಿಟ್ಟಿವೆ. ರೈತರ ಕಾಫಿತೋಟಗಳನ್ನು ಪುಡಿಮಾಡುತ್ತಿವೆ. ಇದರಿಂದ ರೈತರು ತೀವ್ರ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಗ್ರಾಮ B R ಶಿವಕುಮಾರ್ ಅವರ ತೋಟದಲ್ಲಿ ರಾತ್ರಿ ಇಡಿ ಕಾಡಾನೆಗಳು ದಾಂದಲೆ ನಡೆಸಿ ನೂರಾರು ಕಾಫಿಗಿಡಗಳನ್ನು ನಾಶಗೈದಿವೆ. ರಾತ್ರಿಯಿಡೀ ತೋಟದಲ್ಲಿ ಸುತ್ತಾಡಿ ಪಕ್ಕದಲ್ಲೇ ಬೀಡುಬಿಟ್ಟಿವೆ.
ಅರಣ್ಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಕಾಡಾನಗಳನ್ನು ಕಾಡಿಗೆ ಅಟ್ಟಲು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಆನೆಗಳು ಸ್ಥಳವನ್ನು ಬಿಟ್ಟು ಕದಲುತ್ತಿಲ್ಲ.
ಈ ಭಾಗದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಇರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.