ನಿವೃತ್ತಿ ಹೊಂದಿದ ಎಲ್ಲಾ ಶಿಕ್ಷಕರು ತಮ್ಮ ಶಿಷ್ಯರಿಂದ ಗುರುವಂದನೆ ಪಡೆದು ಬೀಳ್ಕೊಡುಗೆ ಸ್ವೀಕರಿಸುವುದು ಹೃದಯಸ್ಪರ್ಶಿ ಕ್ಷಣ ಎಂದು ನಿವೃತ್ತ ಶಿಕ್ಷಕ ಗಿರಿಯಾಪುರದ ವಾಸುದೇವ್ ಮಹೇಂದ್ರ ಹೇಳಿದರು.
ಅವರು ಇತ್ತೀಚೆಗೆ ನಿವೃತ್ತಿ ಹೊಂದಿದ ತಾಲೂಕಿನ ಅಂಗಡಿ ಸರಕಾರಿ ಪ್ರೌಢಶಾಲೆ ಶಿಕ್ಷಕ ಶಾಂತಕುಮಾರ್ ಅವರಿಗೆ ಬೀಳ್ಕೊಡುಗೆ ಮತ್ತು ಗುರುವಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಗುರುವಿನ ಪಾತ್ರ ಪ್ರಮುಖವಾಗುತ್ತದೆ. ಆ ನಿಟ್ಟಿನಲ್ಲಿ ಗುರು ಹಾಗೂ ಶಿಷ್ಯರ ನಡುವೆ ಹೊಂದಾಣಿಕೆ ಭಾವನೆ ಉಂಟಾದರೆ ಅದೇ ಪರಮ ಪವಿತ್ರ ಎಂದರು.
ಚಿತ್ರದುರ್ಗದ ವಾಣಿಜ್ಯ ತೆರಿಗೆ ಅಧಿಕಾರಿ ಜಿ.ಆರ್.ಮಂಜುಪ್ಪ ಮಾತನಾಡಿ, ಹೊಯ್ಸಳರ ಮೂಲ ಅಂಗಡಿ ಗ್ರಾಮದಲ್ಲಿ ಇಂದಿನ ಈ ಗುರು-ಶಿಷ್ಯರ ಸಮ್ಮಿಲನ ಪ್ರತಿ ವ್ಯಕ್ತಿ ಮತ್ತು ಪ್ರತಿ ಘಟನೆಗೆ ಒಬ್ಬ ಉತ್ತಮ ಶಿಕ್ಷಕನಾಗಬಲ್ಲವನು ಗೌರವ ಪಡೆಯುತ್ತಾನೆ. ಇದು ನಮ್ಮ ನಾಡಿನ ಪರಂಪರೆ ಎಂದರು.
ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಅಧ್ಯಕ್ಷರಾದ ಹೆಚ್. ಎಂ. ಶಾಂತಕುಮಾರ್ ಅವರು ಅಂಗಡಿ ಪ್ರೌಢಶಾಲೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ ವೃತ್ತಿ ಬದುಕಿನ ನೆನಪುಗಳು ಸಾರ್ಥಕತೆಯನ್ನು ನೀಡಿದೆ ಎಂದು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷ ಸತೀಶ್, ಟಿ.ಆರ್.ರುದ್ರಪ್ಪ, ಡಾ.ಈಶ್ವರಪ್ಪ, ಮುಗಳಿಕಟ್ಟೆ ಲೋಕೇಶ್, ಗಾ.ಪಂ.ಸದಸ್ಯರಾದ ವಿನೋದ್, ಆದರ್ಶ್, ವಿಜಯ, ಅಂಬಿಕಾ, ಪಾರ್ವತಮ್ಮ, ಸಂಘ ಸಂಸ್ಥೆಗಳ ಮುಖಂಡರು, ಶಾಲೆ ಶಿಕ್ಷಕರು ಮತ್ತಿತರರಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದಲೂ ಹೆಚ್.ಎಂ. ಶಾಂತಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಕಸಬಾ ಹೋಬಳಿ ಕ.ಸಾ.ಪ. ಅಧ್ಯಕ್ಷ ಎಂ.ಎಸ್.ನಾಗರಾಜು ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.