ರಾಜ್ಯ ಸರಕಾರ 5 ಗ್ಯಾರಂಟಿ ರಾಜ್ಯದ ಜನತೆಗೆ ನೀಡುತ್ತಿರುವುದು ಸ್ವಾಗತಾರ್ಹ. ಕೆರೆ ನೀರನ್ನು ಕೆರೆಗೆ ಚೆಲ್ಲುವ ಹಾಗೆ ಜನರ ಹಣ ಜನರಿಗೆ ನೀಡುತ್ತಿದ್ದಾರೆ. ಇದರಲ್ಲಿ ಘನ ಸಾಧನೆ ಏನೂ ಇಲ್ಲ. ನಮ್ಮ ದೇಶದಲ್ಲಿ ಶೇ.70ರಷ್ಟು ಕೂಲಿ ಕಾರ್ಮಿಕರಿದ್ದು, ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಹೇಳಿದರು.
ಅವರು ಗುರುವಾರ ಮೂಡಿಗೆರೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.25ರಿಂದ 28ರವರೆಗೆ ಕಾಫಿ ಮಂಡಳಿ, ಕಾಫಿ ಕಂಪನಿಗಳು ಹಾಗೂ ಪ್ಲಾಂಟರ್ಸ್ಗಳು ಸೇರಿ ಬೆಂಗಳೂರಿನ ಅರಮನೆ ಮೈಧಾನದಲ್ಲಿ ಅಂತರಾಷ್ಟ್ರೀಯ ಕಾಫಿ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮಕ್ಕೆ 82 ದೇಶಗಳ 2.ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದು, ಆದರೆ ಇದಕ್ಕೆ ಕಾರ್ಮಿಕ ಪ್ರತಿನಿಧಿಗಳಾಗಲಿ, ಕಾರ್ಮಿಕ ಇಲಾಖೆಯನ್ನಾಗಲಿ ಆಹ್ವಾನಿಸಿಲ್ಲ.
ಸಮಾವೇಶದಲ್ಲಿ ಕಾಫಿ ಉತ್ಪಾಧನೆ, ಮಾರುಕಟ್ಟೆ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲಿದೆ. ಇದು ಉತ್ತಮ ವಿಚಾರ. ಆದರೆ ಕಾಫಿ ಉದ್ಯಮದ ಪ್ರಮುಖ ಶಕ್ತಿಯಾದ ಕಾರ್ಮಿಕರ ವೇತನ, ಕೆಲಸ, ಜೀವನದ ಸ್ಥಿತಿಗತಿಗಳ ಬಗ್ಗೆ ಗಂಬೀರ ಚರ್ಚೆಯೇ ಇಲ್ಲದಂತಾಗಿದೆ. ಹಾಗಾಗಿ ಸೆ.25ರಂದು ಚಿಕ್ಕಮಗಳೂರಿನಲ್ಲಿ ನಮ್ಮ ಸಮಿತಿ ವತಿಯಿಂದ ಮಲೆನಾಡು ಕಾಫಿ ತೋಟ ಕಾರ್ಮಿಕರ ಹಕ್ಕುಗಳ ರಕ್ಷಣೆ ಒತ್ತಾಯಿಸಿ ಕಾರ್ಮಿಕರ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.
ಮಲೆನಾಡಿನಲ್ಲಿ ಸುಮಾರು 6 ಲಕ್ಷ ಕಾಫಿ ಕಾರ್ಮಿಕರಿದ್ದಾರೆ. ಅಲ್ಲದೇ ಸ್ಥಳೀಯ ಕಾರ್ಮಿಕರ ಜತೆಗೆ ಉತ್ತರ ಕರ್ನಾಟಕ, ಉತ್ತರ ಭಾರತ, ಅಸ್ಸಾಂ, ಬಾಂಗ್ಲಾದೇಶ, ತಮಿಳುನಾಡು, ಶ್ರೀಲಂಕಾದ ಬಹುದೊಡ್ಡ ಸಂಖ್ಯಯ ವಲಸೆ ಕಾರ್ಮಿಕರು ಇಲ್ಲಿದ್ದಾರೆ. ಇವರಿಗೆ ಯವುದೇ ಕಾನೂನು ರಕ್ಷಣೆ ಇಲ್ಲ. ಅಲ್ಲದೇ ಪ್ಲಾಂಟೇಷನ್ ಕಾರ್ಮಿಕ ಕಾಯಿದೆ, ಕರ್ನಾಟಕ ನಿಯಮಗಳು, ಕನಿಷ್ಟ ವೇತನ, ವೇತನ ಪಾವತಿ ಅಂತರರಾಜ್ಯ ವಲಸೆ ಕಾರ್ಮಿಕ ಕಾಯಿದೆ, ಬೋನಸ್, ಭವಿಷ್ಯನಿಧಿ, ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ಕಾರ್ಮಿಕ ಕಾಯಿದೆಗಳು ಮಲೆನಾಡಿನಲ್ಲಿ ಜಾರಿಯಾಗಿಲ್ಲ. ಶೇ.70ರಷ್ಟು ಗುತ್ತಿಗೆ ಆಧಾರದ ಮೇಲೆ ಇವೆ. ಸರಕಾರ ಕಾಫಿ ಪ್ಲಾಂಟರ್, ಕಾಫಿ ಕಂಪನಿಗಳಿಗೆ ಅನೇಕ ಸೌಲಭ್ಯ ಒದಗಿಸುತ್ತಿದ್ದು, ಕಾರ್ಮಿಕರು ಮಾತ್ರ ಎಲ್ಲಾ ಕಾನೂನಾತ್ಮಕ ಹಕ್ಕುಗಳಿಂದ ವಂಚಿತರಾಗಿದ್ದಾರೆ.
ಈ ಎಲ್ಲದರ ಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ವಿಶ್ವ ಕಾಫಿ ದಿನವನ್ನು ವಿಶ್ವ ಕಾಫಿ ಕಾರ್ಮಿಕರ ದಿನವನ್ನಾಗಿಸುವ ಗುರಿ ಸಮಾವೇಶದ್ದಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಟಿಯುಸಿಒಐ ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ, ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಉಪಸ್ಥಿತರಿದ್ದರು.