ಪರಿಸರ ಸಂರಕ್ಷಣೆ ಮಾಡಿದರೆ ಮಾತ್ರ ಮಾನವ ಸೇರಿದಂತೆ ಎಲ್ಲಾ ಪ್ರಾಣಿ, ಪಕ್ಷಿ, ಜೀವಸಂಕುಲಗಳು ಬದುಕಲು ಸಾಧ್ಯ ಎಂದು ರೋಟರಿ ಸಂಸ್ಥೆ ಅಸಿಸ್ಟೆಂಟ್ ಗೌರ್ನರ್ ವಿನೋದ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಮಂಗಳವಾರ ಮೂಡಿಗೆರೆ ಪಟ್ಟಣದ ಬಿಳಗುಳದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಸಂಸ್ಥೆ ಆಯೋಜಿಸಿದ್ದ ಗಿಡ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಿಡಗಳನ್ನು ನೆಟ್ಟು ಬಿಟ್ಟರೆ ಸಾಲದು. ಅದನ್ನು ಮರವಾಗಿ ಬೆಳೆಯುವಂತೆ ಪೋಷಿಸಿದರೆ ಮಾತ್ರ ಮರದಲ್ಲಿ ಹಣ್ಣು ಬಿಟ್ಟು, ಪರಿಸರದಲ್ಲಿ ಉತ್ತಮ ಗಾಳಿ ಹಾಗೂ ವಾತಾವರಣ ಸೃಷ್ಟಿಯಾಗಲು ಸಾಧ್ಯವಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಮನೆ ಮುಂದೆ ಗಿಡ ನೆಟ್ಟು ಪೋಷಿಸಬೇಕೆಂದು ಸಲಹೆ ನೀಡಿದರು.
ರೋಟರಿ ಸಂಸ್ಥೆ ಅಧ್ಯಕ್ಷ ತೇಜಸ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವನ ಸ್ವಾರ್ಥತೆಯಿಂದ ಕಾಡುಗಳು ನಾಶವಾಗುತ್ತಿದೆ. ನಗರ ಪ್ರದೇಶದಲ್ಲಿ ಮರ ಗಿಡಗಳಿಲ್ಲದೆ ವಾಹನಗಳ ಶಬ್ದ ಹೊಗೆಯಿಂದ ಪಟ್ಟಣಗಳು ಮಲಿನವಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಮುಂದಿನ ಪೀಳಿಗೆ ಅಪಾಯಕ್ಕೆ ಸಿಲುಕಬೇಕಾಗುತ್ತದೆ. ಹಾಗಾಗಿ ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ಸಚಿನ್, ಎಸ್ಡಿಎಂಸಿ ಉಪಾಧ್ಯಕ್ಷೆ ಮುಬೀನ, ವಿವೇಕ್ ಪುಣ್ಯ ಮೂರ್ತಿ, ಎಚ್.ಕೆ.ಯೋಗೇಶ್. ಕೆ.ಎಚ್.ವೆಂಕಟೇಶ್, ವಿಕಾಸ್, ಮುಖ್ಯ ಶಿಕ್ಷಕಿ ಚೂಡಾಮಣಿ. ದೈಹಿಕ ಶಿಕ್ಷಕ ಸುರೇಶ್ಗೌಡ ಮತ್ತಿತರರಿದ್ದರು.