ಪ್ರಸಿದ್ಧ ತೀರ್ಥಕ್ಷೇತ್ರ ಸ್ಥಳ ಕೇದಾರನಾಥ ಯಾತ್ರೆಗೆ ತೆರಳಿದ್ದ ಮೂಡಿಗೆರೆ ಮೂಲದ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಮೂಡಿಗೆರೆ ತಾಲ್ಲೂಕಿನ ಜನ್ನಾಪುರ ಗ್ರಾಮದ ಗಿರೀಶ್(25 ವರ್ಷ) ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರಿನ ತನ್ನ ಸ್ನೇಹಿತನೊಂದಿಗೆ ಕಳೆದ ವಾರ ಕೇದಾರನಾಥ ಯಾತ್ರೆಗೆ ತೆರಳಿದ್ದ ಗಿರೀಶ್ ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ
ಜನ್ನಾಪುರದ ಚಂದ್ರು ಎನ್ನುವವರ ಪುತ್ರರಾದ ಗಿರೀಶ್ ಅಡುಗೆ ವೃತ್ತಿ ಮಾಡುತ್ತಿದ್ದರು.
ಜನ್ನಾಪುರದ ಅವರ ಸಂಬಂಧಿ ಅಡುಗೆ ಕಂಟ್ರಾಕ್ಟರ್ ಶಿಲ್ಪಿ ಯವರು ನೀಡಿರುವ ಮಾಹಿತಿಯಂತೆ ಗಿರೀಶ್ ಯಾತ್ರೆಯ ಅವಧಿಯಲ್ಲಿ ನನ್ನೊಂದಿಗೆ ಸತತವಾಗಿ ಪೋನ್ ಸಂಪರ್ಕದಲ್ಲಿದ್ದರು. ಗಿರೀಶ್ ಮತ್ತು ಅವರ ಸ್ನೇಹಿತ ಕೇದಾರನಾಥ ಕಡೆಗೆ ಬಸ್ ನಲ್ಲಿ ಪ್ರಯಾಣಿಸುವಾಗ ದಾರಿಯಲ್ಲಿ ಊಟಕ್ಕೆ ಎಂದು ಗಿರೀಶ್ ಬಸ್ ನಿಂದ ಇಳಿದಿದ್ದರು. ಆ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ರಿಷಿಕೇಷ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಲ್ಲಿಂದ ಜನ್ನಾಪುರಕ್ಕೆ ಮೃತದೇಹವನ್ನು ತರಲು ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳ ಮತ್ತು ಜಿಲ್ಲಾಢಳಿತದ ನೆರವು ಕೋರಲಾಗಿದೆ. ನಾಳೆ ಸಂಜೆ ಹೊತ್ತಿಗೆ ಮೃತದೇಹ ಊರಿಗೆ ತಲುಪುವ ಸಾಧ್ಯತೆಯಿದೆ ಎಂದಿದ್ದಾರೆ.
ಮೃತ ಗಿರೀಶ್ ತಂದೆ, ತಾಯಿ, ಸಹೋದರಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ತನ್ನ ಪುತ್ರನನ್ನು ಕಳೆದುಕೊಂಡು ಅವರ ಕುಟುಂಬ ಕಂಗಾಲಾಗಿದೆ.