ಕಾಫಿ ಬೆಳೆಗಾರರೊಬ್ಬರ ಕಾಫಿ ಪಲ್ಪರ್ ಘಟಕಕ್ಕೆ ಅವೈಜ್ಞಾನಿಕ ಮತ್ತು ದುಬಾರಿ ಬಿಲ್ ನೀಡಿದ ಚಾಮುಂಡೇಶ್ವರಿ ವಿದ್ಯುತ್ ವಿತರಣಾ ಕಂಪನಿಗೆ ಹಾಸನ ಗ್ರಾಹಕರ ನ್ಯಾಯಾಲಯ ದಂಡ ವಿಧಿಸಿದೆ.
ಬೇಲೂರು ತಾಲ್ಲೂಕು ಅನುಘಟ್ಟ ಗ್ರಾಮದ ಕಾಫಿ ಬೆಳೆಗಾರರು ಹಾಗೂ ಹಾಸನ ಬೆಳೆಗಾರರ ಸಂಘದ ಮಾಜಿ ಗೌರವ ಕಾರ್ಯದರ್ಶಿಗಳಾದ ಪಿ. ವಿಶ್ವನಾಥ ನಾಯಕರಿಗೆ ಪಲ್ಪರ್ ಘಟಕಕ್ಕಾಗಿ ಪಡೆದ ವಿದ್ಯುತ್ ಸಂಪರ್ಕಕ್ಕೆ ಚೆಸ್ಕಾಂ ಸಿಬ್ಬಂದಿ ದುಬಾರಿ ಬಿಲ್ ನೀಡಿದ್ದರು. ಪಲ್ಪರ್ ಘಟಕಕ್ಕೆ ರೂ. 1,75,858-00 ರೂಗಳ ಬಿಲ್ ನೀಡಲಾಗಿತ್ತು. ಆದರೆ ವಿಶ್ವನಾತ ನಾಯಕರು ತಾನು ಇಷ್ಟು ಪ್ರಮಾಣದ ವಿದ್ಯುತ್ ಬಳಸಿಲ್ಲ ಎಂದು ಪ್ರಶ್ನಿಸಿ ವಿಶ್ವನಾಥ ಅವರು ಹಾಸನದ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯ ವಿಚಾರಣೆ ನಡೆಸಿ ಇತ್ತೀಚೆಗೆ ತನ್ನ ತೀರ್ಪು ಪ್ರಕಟಿಸಿದೆ. ನ್ಯಾಯಾಲಯ ತನ್ನ ತೀರ್ಪಿನಲ್ಲಿ ಚೆಸ್ಕಾಂ ನೀಡಿರುವ ಬಿಲ್ ಅನ್ನು ಸಂಪೂರ್ಣ ಮನ್ನಾ ಮಾಡಿಸಿ ನಂತರ 10,000 ರೂಗಳನ್ನು ಸೇವಾಲೋಪಕ್ಕಾಗಿ ಹಾಗೂ 10,000 ರೂಗಳನ್ನು ನ್ಯಾಯಾಲಯದ ವೆಚ್ಚಕ್ಕಾಗಿ ವಿಶ್ವನಾಥ್ ನಾಯಕರಿಗೆ ಚೆಸ್ಕಾಂ ಸಂಸ್ಥೆ 45 ದಿನಗಳ ಒಳಗೆ ಪಾವತಿಸುವಂತೆ ಆದೇಶ ನೀಡಿರುತ್ತದೆ.