ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರುವ ಜನಪ್ರಿಯ ರಿಯಾಲಿಟಿ ಶೋ ಸುವರ್ಣ ಸೂಪರ್ ಸ್ಟಾರ್ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಶಿಕ್ಷಕಿ ಶ್ರೀಮತಿ ನಿರಂಜನ ವಿನ್ನರ್ ಆಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಬುಧವಾರ ಬೆಂಗಳೂರಿನ ಸುವರ್ಣ ಟಿ.ವಿ. ಸ್ಟುಡಿಯೋದಲ್ಲಿ ನಡೆದ ರಿಯಾಲಿಟಿ ಶೋ ಸ್ಪರ್ಧೆಯ ಎಲ್ಲಾ ನಾಲ್ಕು ವಿಭಾಗಗಳಲ್ಲಿ ಜಯಗಳಿಸಿದ ನಿರಂಜನ ಸುವರ್ಣ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ಶ್ರೀಮತಿ ನಿರಂಜನ ಮೂಡಿಗೆರೆ ತಾಲ್ಲೂಕಿನ ಹಾಲೂರು ಗ್ರಾಮದವರು. ಬಿ.ಜೆ.ಪಿ. ಮೂಡಿಗೆರೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ ಅವರ ಧರ್ಮಪತ್ನಿ. ಅವರು ಪ್ರಸ್ತುತ ಮೂಡಿಗೆರೆ ತಾಲ್ಲೂಕಿನ ಅಂಗಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಹುಮುಖ ಪ್ರತಿಭಾವಂತರಾದ ನಿರಂಜನ ನಿರೂಪಣೆ, ಭಾಷಣ ಕಲೆಯಲ್ಲಿ ತನ್ನ ಛಾಪು ಮೂಡಿಸಿದ್ದಾರೆ. ಹಲವಾರು ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಇದೀಗ ರಾಜ್ಯಮಟ್ಟದಲ್ಲಿ ತನ್ನ ಪ್ರತಿಭೆಯನ್ನು ತೋರ್ಪಡಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.