ಮದ್ರಾಸ್ ಐ (ಕೆಂಗಣ್ಣು) ಕಾಯಿಲೆಯ ಸೋಂಕು ಒಬ್ಬರಿಂದ ಒಬ್ಬರಿಗೆ ಅತಿ ವೇಗವಾಗಿ ಹರಡುತ್ತಿದೆ. ಜಿಲ್ಲೆಯ ಅನೇಕ ಶಾಲೆ ಮತ್ತು ವಿದ್ಯಾರ್ಥಿನಿಲಯಗಳಲ್ಲಿ ಈಗಾಗಲೇ ನೂರಾರು ವಿದ್ಯಾರ್ಥಿಗಳಿಗೆ ಮದ್ರಾಸ್ ಐ ಸೋಂಕು ತಗುಲಿದೆ. ಮೂಡಿಗೆರೆ ತಾಲ್ಲೂಕು ಒಂದರಲ್ಲೇ 184 ವಿದ್ಯಾರ್ಥಿಗಳಲ್ಲಿ ಈ ಮದ್ರಾಸ್ ಐ ಕಾಯಿಲೆ ಕಾಣಿಸಿಕೊಂಡಿದೆ.
ಕಳೆದ ಏಳೆಂಟು ದಿನದ ಹಿಂದೆ ಈ ಸೋಂಕು ಜಿಲ್ಲೆಯ ಕೆಲ ವಿದ್ಯಾರ್ಥಿ ನಿಯಯಗಳಲ್ಲಿ ಕಾಣಿಸಿಕೊಂಡಿದೆ. ಮೂಡಿಗೆರೆ ಪಟ್ಟಣದ ಫ್ರೀ ಮೆಟ್ರಿಕ್ ಬಾಲಕರ ಹಾಸ್ಟೆಲ್ನ 125 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೂಡಲೇ ಹಾಸ್ಟೆಲ್ ವಾರ್ಡನ್ ಎಚ್ಚೆತ್ತುಕೊಂಡು ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಸೂಕ್ತ ಚಿಕಿತ್ಸೆ ದೊರಕಿಸಿದ್ದರಿಂದ ಇದೀಗ 20 ವಿದ್ಯಾರ್ಥಿಗಳು ಗುಣಮಖರಾಗಿದ್ದಲ್ಲದೇ ಇತರೇ ವಿದ್ಯಾರ್ಥಿಗಳಿಗೆ ಹರಡುವುದನ್ನು ತಪ್ಪಿಸಲಾಗಿದೆ.
ಬಿದರಹಳ್ಳಿ ಮುರಾರ್ಜಿ ವಸತಿ ಶಾಲೆಯಲ್ಲಿ 164 ವಿದ್ಯಾರ್ಥಿಗಳಿಗೆ ಮದ್ರಾಸ್ ಐ ಸೋಂಕು ಆವರಿಸಿಕೊಂಡಿದೆ. ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಗುಣಮುಖರಾಗುತ್ತಿದ್ದಾರೆ. ಸೋಂಕು ಹರಡುವಿಕೆ ಅಧಿಕಗೊಳ್ಳುತ್ತಿದ್ದಂತೆ ಪೋಷಕರಿಗೆ ಮಾಹಿತಿ ತಿಳಿಸಿದ್ದು, ಕೆಲ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದಾರೆ. ಸೋಂಕಿತ ವಿದ್ಯಾರ್ಥಿಗಳಿಗೆ ಕಣ್ಣಿನ ವೈದ್ಯರಿಂದ ಚಿಕಿತ್ಸೆ ನೀಡುವ ಮೂಲಕ ಇತರೇ ವಿದ್ಯಾರ್ಥಿಗಳಿಗೆ ಸೋಂಕು ಹರಡದಂತೆ ಎಚ್ಚರ ವಹಿಸಲಾಗಿದೆ. ಗುರುವಾರ ಜಿ.ಪಂ. ಸಿಇಒ ಗೋಪಾಲಕೃಷ್ಣ ಹಾಗೂ ಡಿಎಚ್ಒ ಕಚೇರಿಯಿಂದ ವೈದ್ಯರು ಆಗಮಿಸಿ ಪರಿಶೀಲಿಸಿದ್ದಾರೆ.
ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಮೂಡಿಗೆರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಂದರೇಶ್ : ಮದ್ರಾಸ್ ಐ ಸೋಂಕು ಬಗ್ಗೆ ಯಾರಲ್ಲೂ ಭಯ ಬೇಡ. ಒಮ್ಮೆ ಸೋಂಕು ಹರಡಿದರೆ ನಾಲ್ಕೈದು ದಿನದಲ್ಲಿ ಗುಣವಾಗುತ್ತದೆ. ತಾಲೂಕಿನಲ್ಲಿ 184 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿನಿತ್ಯ ಮೆಡಿಕಲ್ ಆಫಿಸರ್ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ವಚ್ಛತೆ ಕಾಪಾಡಿಕೊಂಡರೆ ಸೋಂಕು ಆವರಿಸಿಕೊಳ್ಳದಂತೆ ತಡೆಯಬಹುದು ಎಂದಿದ್ದಾರೆ.